ಓವೈಸಿಗೆ ಮೂಗುತಿ ಸುಂದರಿ ಸಾನಿಯಾ ಸವಾಲು
ಹೈದರಾಬಾದ್,ಮಾ.೨೮-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ರಾಜಕೀಯ ಬಿಸಿ ಏರುತ್ತಿದೆ. ಒಂದೆಡೆ ಬೇಸಿಗೆಯ ಬೇಗೆ ಜನಸಾಮಾನ್ಯರನ್ನು ಕಾಡುತ್ತಿದ್ದರೆ ಮತ್ತೊಂದೆಡೆ ರಾಜಕೀಯ ರಂಗೇರುತ್ತಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಈಗಾಗಲೇ ತಮ್ಮದೇ ಶೈಲಿಯಲ್ಲಿ ಪ್ರಚಾರ ನಡೆಸುತ್ತಿವೆ. ಪಕ್ಷಗಳು ಅಭ್ಯರ್ಥಿಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತವೆ. ಗೆಲ್ಲುವ ಕುದುರೆಗಳಿಗೆ ಟಿಕೆಟ್ ನೀಡಲು ಆಸಕ್ತಿ. ಬೇರೆ ಪಕ್ಷಗಳ ಮುಖಂಡರಿಗೂ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಎಂಪಿ ಚುನಾವಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ವಿಂಬಲ್ಡನ್ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಕಾಂಗ್ರೆಸ್ ಪಕ್ಷದಿಂದ ಹೈದರಾಬಾದ್ ಕ್ಷೇತ್ರಕ್ಕೆ ಸಂಸದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದು ಈಗ ತೆಲಂಗಾಣ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಗೆ ಟಿಕೆಟ್ ಬಹುತೇಕ ಅಂತಿಮಗೊಂಡಿದೆ ಎಂದು ವರದಿಯಾಗಿದೆ.ಕಾಂಗ್ರೆಸ್ ಪಕ್ಷದ ಚುನಾವಣಾ ರಣತಂತ್ರದ ಹೆಜ್ಜೆಯಾಗಿದೆ.
ಸಾನಿಯಾ ಹೆಸರನ್ನು ಅಜರುದ್ದೀನ್ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
.ಕುತೂಹಲದ ಮಾಹಿತಿ ಪ್ರಕಾರ ಅಸಾದುದ್ದೀನ್ ಓವೈಸಿಗೆ ಸಾನಿಯಾ ಮಿರ್ಜಾ ನೇರ ಸ್ಪರ್ಧೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ಕಾಂಗ್ರೆಸ್ ಪಕ್ಷವು ಸಾನಿಯಾ ಮಿರ್ಜಾ ಅವರ ಜನಪ್ರಿಯತೆಯ ಲಾಭವನ್ನು ಪಡೆಯಲು ಬಯಸಿದೆ,ಆದ್ದರಿಂದ ಅವರನ್ನು ಹೈದರಾಬಾದ್‌ನಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕಿಳಿಸಲು ಯೋಚಿಸಿದೆ .
ಹೈದರಾಬಾದ್ ಲೋಕಸಭೆಯು ಮಜ್ಜಿಸ್ ಪಕ್ಷದ ಭದ್ರಕೋಟೆಯಾಗಿದೆ.ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಶತಾಯ-ಗತಾಯ ಮಜ್ಜಿಸ್ ಪಕ್ಷದ ಭದ್ರಕೋಟೆಯನ್ನು ಒಡೆಯಲು ಮುಂದಾಗಿರುವಂತೆ ಕಾಣುತ್ತಿದೆ.
ಅಸಾದುದ್ದೀನ್ ಓವೈಸಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿರುವ ಕಾರಣ ಸಾನಿಯಾ ಮಿರ್ಜಾ ಅವರಂತಹ ಸ್ಟಾರ್ ಇಮೇಜ್ ಹೊಂದಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಭಾವಿಸಿದೆ.ಇತ್ತೀಚೆಗಷ್ಟೇ
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದರಲ್ಲಿ ಲೋಕಸಭೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸಭೆಯಲ್ಲಿ ಮೊಹಮ್ಮದ್ ಅಜರುದ್ದೀನ್ ಅವರು ಹೈದರಾಬಾದ್‌ನಿಂದ ಸಾನಿಯಾ ಮಿರ್ಜಾಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮೊಹಮ್ಮದ್ ಅಜರುದ್ದೀನ್ ಅವರು ಸಾನಿಯಾ ಮಿರ್ಜಾ ಅವರೊಂದಿಗೆ ಕುಟುಂಬ ಸಂಬಂಧ ಹೊಂದಿದ್ದಾರೆ. ಅಜರುದ್ದೀನ್ ಅವರ ಪುತ್ರ ಅಸಾದುದ್ದೀನ್ ಅವರು ಸಾನಿಯಾ ಮಿರ್ಜಾ ಅವರ ತಂಗಿ ಅನಮ್ ಮಿರ್ಜಾ ಅವರನ್ನು ವಿವಾಹವಾಗಿದ್ದಾರೆ. ಹೈದರಾಬಾದ್‌ನ ಲೋಕಸಭಾ ಸ್ಥಾನವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯಮಯ ಜನಸಂಖ್ಯಾ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಾನವು ಯಾವಾಗಲೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ನ ಭದ್ರಕೋಟೆಯಾಗಿದೆ. ಆದಾಗ್ಯೂ, ಇತ್ತೀಚೆಗೆ ಈ ಪ್ರದೇಶವು ಕಾಂಗ್ರೆಸ್‌ಗೆ ತುಂಬಾ ಒಳ್ಳೆಯದು ಎಂದು ಸಾಬೀತಾಗಿದೆ, ಇದರಲ್ಲಿ ಎಐಎಂಐಎಂ ಪ್ರಬಲ ಸವಾಲನ್ನು ಎದುರಿಸಿದೆ. ಈ ನಿಟ್ಟಿನಲ್ಲಿ ಹೈದರಾಬಾದ್ ಈ ಬಾರಿ ವಿಶೇಷ ಎನಿಸಿಕೊಂಡಿದೆ.