400 ವಾಟರ್ ಕೂಲರ್‍ಗಳ ವಶ, ಪ್ರಕರಣ ದಾಖಲಿಸಲು ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆ
ದಾವಣಗೆರೆ,ಮಾ.26 ಬಾಂಬೆಯಿಂದ ದಾವಣಗೆರೆಗೆ ಪೂರೈಕೆ ಮಾಡಿದ 400 ವಾಟರ್ ಕೂಲರ್‍ಗಳ ಇ-ವೇಬಿಲ್ ಸೃಜನೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಮಂಗಳವಾರ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗದದಲ್ಲಿ ವಾಹನದೊಂದಿಗೆ ವಸ್ತುಗಳ ಪರಿಶೀಲನೆ ನಡೆಸಿದರು. ವಾಟರ್ ಕೂಲರ್ ಸಾಗಣೆ ಮಾಡಿದ ವಾಹನಗಳನ್ನು ವಾಣೀಜ್ಯ ತೆರಿಗೆ ಇಲಾಖೆ ಜಾಗೃತ ದಳದ ಅಧಿಕಾರಿಗಳು ಮಾರ್ಚ್ 22 ರಂದು ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತುವೇಳೆ ವಾಹನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ರೂ.3,11,520 ಮೌಲ್ಯದ 400 ವಾಟರ್ ಕೂಲರ್‍ಗಳನ್ನು ಎರಡು ವಾಹನಗಳಲ್ಲಿ ಬಾಂಬೆಯಿಂದ ದಾವಣಗೆರೆ ಹರಿಹೊಂ ಎಂಟರ್‍ಪ್ರೈಸಸ್‍ಗೆ ಪೂರೈಕೆಯಾಗಿದ್ದು ದಾವಣಗೆರೆಯಲ್ಲಿ ವಾಹನ ತಪಾಸಣೆ ಮಾಡುವುದಕ್ಕಿಂತ 3 ಗಂಟೆ ಮೊದಲು ಮಾತ್ರ ಇ–ವೇಬಿಲ್ ಸೃಜನೆಯಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇದು ಅನುಮಾನಾಸ್ಪದವಾಗಿದೆ. ಬಾಂಬೆಯಿಂದ ದಾವಣಗೆರೆಗೆ ಆಗಮಿಸಲು ಕನಿಷ್ಠ 18 ಗಂಟೆಗಳ ಕಾಲ ಪ್ರಯಾಣದ ಅವಧಿಯಾಗಲಿದೆ. ವಾಹನ ವಶಕ್ಕೆ ಪಡೆಯುವುದಕ್ಕಿಂತÀ ಮೂರು ಗಂಟೆ ಮೊದಲು ಆನ್‍ಲೈನ್ ಬಿಲ್ ಸೃಜನೆ ಮಾಡಿರುವುದು ಕಂಡು ಬಂದಿದ್ದು ಇದು ಜಿ.ಎಸ್.ಟಿ. ನಿಯಮದ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ಮಾರ್ಚ್ 22 ರಂದು ಇವುಗಳನ್ನು ವಶಕ್ಕೆ ಪಡೆದು ಎಫ್.ಎಸ್.ಟಿ.ಗೆ ತನಿಖೆಗಾಗಿ ವಹಿಸಲಾಗಿತ್ತು. ಆದರೆ ಸ್ಪಷ್ಟನೆ ನೀಡದ ಕಾರಣ ಇದು ಚುನಾವಣಾ ಸಂದರ್ಭದಲ್ಲಿ ವಿತರಣೆಗೆ ಬಳಸಲು ಉದ್ದೇಶಿಸಿರಬೇಕೆಂದು ಅನುಮಾನಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಯವರು ಸದರಿ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲು ನಿರ್ದೇಶನ ನೀಡಿರುತ್ತಾರೆ.
ಈ ಪರಿಶೀಲನೆ ವೇಳೆ ದಾವಣಗೆರೆ ಪಾಲಿಕೆ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿ ರೇಣುಕಾ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆ ತನಿಖಾಧಿಕಾರಿ ನಟರಾಜ್ ಉಪಸ್ಥಿತರಿದ್ದರು.