ಭಾರೀ ಮಳೆ ಕಬ್ಬು -ಭತ್ತದ ಬೆಳೆ ನಾಶ
ಮೊರಾದಾಬಾದ್, ಸೆ.೧೪-ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ.ಕಂಠದ ಖಾದರ್ ಪ್ರದೇಶದಲ್ಲಿ ಶುಕ್ರವಾರ ಸಂಜೆ ರಾಮಗಂಗಾ ನದಿಯ ನೀರು ಅನೇಕ ರೈತರ ಹೊಲಗಳಿಗೆ ನುಗ್ಗಿದೆ.ಇದರಿಂದ ಭತ್ತ-ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ.
ಮೊರಾದಾಬಾದ್‌ನಲ್ಲಿ ಭಾರೀ ಮಳೆಯಿಂದಾಗಿ ರೈತರು ತೀವ್ರ ಬೆಳೆ ಹಾನಿಯನ್ನು ಎದುರಿಸುತ್ತಿದ್ದಾರೆ.ಸರಿಸುಮಾರು ೬೦ ಪ್ರತಿಶತ ಕಬ್ಬು ಮತ್ತು ೭೦ ಪ್ರತಿಶತ ಭತ್ತದ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗಳು ಜಲಾವೃತಗೊಂಡಿವೆ, ಬಲವಾದ ಗಾಳಿಯಿಂದ ವ್ಯಾಪಕ ಬೆಳೆ ಹಾನಿಯಾಗಿದೆ. ಮೂಲಗಳ ಪ್ರಕಾರ ಹಲವು ಪ್ರದೇಶಗಳಲ್ಲಿ ಕಬ್ಬು ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಭತ್ತದ ಗದ್ದೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.ಮೊರಾದಾಬಾದ್ ಭತ್ತ, ಗೋಧಿ ಮತ್ತು ಕಬ್ಬಿನ ಕೃಷಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದ ರೈತರು ಈ ಪ್ರಾಥಮಿಕ ಬೆಳೆಗಳ ಜೊತೆಗೆ ತರಕಾರಿಗಳನ್ನು ಸಹ ಬೆಳೆಯುತ್ತಾರೆ.
ಮುಂಡಪಾಂಡೆ, ಠಾಕೂರದ್ವಾರ ಸೇರಿದಂತೆ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ರೈತರ ಭತ್ತದ ಬೆಳೆಗಳು ನಾಶವಾಗಿವೆ. ಮುಂಡಪಾಂಡೆಯ ರೈತ ಮುಖಂಡ ನರೇಶ್ ಚೌಹಾಣ್ ಮಾತನಾಡಿ, ಮೊದಲು ಭತ್ತದ ಬೆಳೆ ಪ್ರವಾಹದಿಂದ ಹಾನಿಗೀಡಾಗಿದ್ದು, ಇದೀಗ ಸತತ ಮಳೆಯಿಂದ ಭತ್ತದ ಬೆಳೆ ಹಾಳಾಗಿದೆ. ಭತ್ತದ ಬೆಳೆಗೆ ಆಗಿರುವ ಹಾನಿಯ ಕುರಿತು ಜಿಲ್ಲಾ ತೋಟಗಾರಿಕೆ ಅಧಿಕಾರಿ ಗಯಾ ಪ್ರಸಾದ್ ಮಾತನಾಡಿ, ಭತ್ತದ ಬೆಳೆಗೆ ಆಗಿರುವ ಹಾನಿಯನ್ನು ಅಂದಾಜಿಸಿ, ನಷ್ಟವಾದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ರಾಮಗಂಗಾ ಮತ್ತು ಗಂಗಾ ನದಿಗಳು ಅಪಾಯದ ಮಟ್ಟ ತಲುಪಿವೆ. ಪ್ರವಾಹದ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ೩೫ ಪ್ರವಾಹ ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೇ ನದಿ ದಡದಲ್ಲಿರುವ ಗ್ರಾಮಗಳ ಮೇಲೆ ದಿನದ ೨೪ ಗಂಟೆಯೂ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ಗೂ ಎಚ್ಚರಿಕೆ ನೀಡಲಾಗಿದೆ.