ಕೆಪಿಎಸ್‌ಸಿ ಮರುಪರೀಕ್ಷೆ
ಪೂರ್ವಭಾವಿ ಪರೀಕ್ಷೆಯಲ್ಲಿ ಭಾಷಾಂತರ ದೋಷ: ಒತ್ತಡಕ್ಕೆ ಮಣಿದ ಸರ್ಕಾರ, ೨ ತಿಂಗಳ ಗಡುವು ಸಿಎಂ

ಬೆಂಗಳೂರು, ಸೆ. ೨-ಇತ್ತೀಚೆಗೆ ನಡೆದ ಕೆಪಿಎಸ್ ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಕಂಡು ಭಾಷಾಂತರ ದೋಷಕ್ಕೆ ವ್ಯಾಪಕ ಆಕ್ರೋಶಕ್ಕೆ ಮಣಿದಿರುವ ರಾಜ್ಯ ಸರ್ಕಾರ ೨ ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಜವಾಬ್ದಾರಿ ಹಾಗೂ ಸಮರ್ಪಕವಾಗಿ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕೆಯನ್ನು ಎತ್ತಿ ಹಿಡಿದು ಪರೀಕ್ಷಾರ್ಥಿಗಳು ಹಿತಕಾಯಲು ಬದ್ಧರಾಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಆಗಸ್ಟ್ ೨೭ ರಂದು ಕರ್ನಾಟಕ ಲೋಕಸೇವಾ ಆಯೋಗ ೩೮೪ ಗೆಜೆಟೆಡ್ ಪೂರ್ವಭಾವಿ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ಪ್ರಶ್ನೆಗಳಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದವು.
ಪರೀಕ್ಷೆಯ ಎಲ್ಲಾ ಪ್ರಶ್ನೆಪತ್ರಿಕೆಗಳಲ್ಲೂ ಹಲವು ತಪ್ಪುಗಳು ಕಂಡು ಬಂದಿದ್ದವು. ಕೆಲವು ಉತ್ತರ ಆಯ್ಕೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ವಿರುದ್ಧವಾಗಿದ್ದವು. ಮತ್ತೇ ಕೆಲವು ಪ್ರಶ್ನೆಗಳಿಗೆ ಉತ್ತರವನ್ನೇ ನಮೂದಿಸಲು ಆಗದಷ್ಟು ದೋಷಗಳು ಕಂಡುಬಂದಿದ್ದವು.
ಕೆಪಿಎಸ್‌ಸಿ ಈ ಯಡವಟ್ಟಿನಿಂದಾಗಿ ಅಭ್ಯರ್ಥಿಗಳು, ಸಂಘಸಂಸ್ಥೆಗಳಿಂದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು. ಪ್ರಶ್ನೆಪತ್ರಿಕೆಗಳ ಫೋಟೋಗಳನ್ನು ಸಹ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಕೆಪಿಎಸ್‌ಸಿ ಅವ್ಯವಸ್ಥೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಪ್ರಶ್ನೆಗೆ ಯಾವುದೇ ಸರಿ ಉತ್ತರ ಎಂದು ಕೇಳುವ ಬದಲು ಈ ಪ್ರಶ್ನೆಗೆ ತಪ್ಪು ಉತ್ತರ ಯಾವುದು ಎಂದು ಕೇಳಲಾಗಿತ್ತು. ಇಂಗ್ಲಿಷ್ ತಪ್ಪು ಹೇಳಿಕೆ ಎಂದು ಕೇಳಿದ್ದರೆ ಮತ್ತು ಕನ್ನಡದಲ್ಲಿ ಸರಿ ಹೇಳಿಕೆ ಯಾವುದು ಎಂದು ಕೇಳುವ ಮೂಲಕ ಅಭ್ಯರ್ಥಿಗಳನ್ನು ಗೊಂದಲಕ್ಕೀಡು ಮಾಡಿತ್ತು.
ಪ್ರಶ್ನೆ ಪತ್ರಿಕೆ ಒಂದು, ಪ್ರಶ್ನೆ ಪತ್ರಿಕೆ ೨ರಲ್ಲೂ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದವು. ಕೆಪಿಎಸ್‌ಸಿ ಈ ವ್ಯವಸ್ಥೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಲೋಪದೋಷಗಳು ಕುರಿತಂತೆ ಕೆಪಿಎಸ್‌ಸಿಗೆ ವಿವರಣೆ ನೀಡುವಂತೆ ಕೇಳಿತ್ತು. ಕೆಲವು ಅಭ್ಯರ್ಥಿಗಳು ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸಿರುವ ಕಾರಣ ಪರೀಕ್ಷೆಯಲ್ಲಿನ ಕನ್ನಡ ಪ್ರಶ್ನೆಗಳನ್ನು ಓದಲು ಸಾಧ್ಯವಾಗಿರಲಿಲ್ಲ. ಇಂಗ್ಲಿಷ್ ಸಹ ಗೊತ್ತಿರಲಿಲ್ಲ ಎಂದು ಅಭ್ಯರ್ಥಿಯೊಬ್ಬರು ನೀಡಿದ ಹೇಳಿಕೆ ನೀಡಿದ್ದರು.
ಕೆಪಿಎಸ್‌ಸಿಯ ಈ ಪರೀಕ್ಷಾ ಅವಾಂತರ ಪರೀಕ್ಷಾ ವ್ಯವಸ್ಥೆಯನ್ನೇ ಅಭ್ಯರ್ಥಿಗಳು ಅನುಮಾನ ಪಡುವಂತೆ ಮಾಡಿತ್ತು ಹಾಗೂ ರಾಜ್ಯ ಸರ್ಕಾರಕ್ಕೂ ಸಹ ಕೆಪಿಎಸ್‌ಸಿಯ ಈ ದೋಷ ತೀವ್ರ ಮುಜುಗರ ಉಂಟು ಮಾಡಿತ್ತು.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಕೆಪಿಎಸ್‌ಸಿ ಗೆಜೆಟೆಡ್ ಪ್ರಶ್ನೆ ಪತ್ರಿಕೆಗಳಲ್ಲಿ ಅಸಮರ್ಪಕ ಕನ್ನಡ ಅನುವಾದದ ಕಂಡು ಬಂದ ಹಿನ್ನೆಲೆ ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ೨ ತಿಂಗಳೊಳಗೆ ಪರೀಕ್ಷೆಯನ್ನು ಮರು ವ್ಯವಸ್ಥೆಗೊಳಿಸುವಂತೆ ಸಿಎಂ ಸೂಚಿಸಿದ್ದಾರೆ.
ಉಳಿದಂತೆ ಈ ಪರೀಕ್ಷೆಯಲ್ಲಿನ ಲೋಪದೋಷಗಳಿಗೆ ಕಾರಣರಾದವರನ್ನು ಈಗಾಗಲೇ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಮುಂಬರುವ ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ಜವಾಬ್ದಾರಿಯಿಂದ ಮತ್ತು ಹೊಣೆಗಾರಿಕೆಯಿಂದ ನಡೆಸಲಾಗುವುದು ಎಂದಿರುವ ಸಿಎಂ ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆಯಿಂದ ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.