ನಾಡಿದ್ದು ವಿಜಯನಗರದಲ್ಲಿ ಪಾಲಿಕೆ ಬಜಾರ್ ಲೋಕಾರ್ಪಣೆ
ಬೆಂಗಳೂರು, ಆ. ೨೩- ದೆಹಲಿಯಂತೆಯೇ ರಾಜ್ಯ ರಾಜಧಾನಿ ಬೆಂಗಳೂರಿನ ವಿಜಯನಗರದಲ್ಲಿ ’ಪಾಲಿಕೆ ಬಜಾರ್ ನಿರ್ಮಾಣಗೊಂಡಿದೆ. ಇದೇ ಭಾನುವಾರ ಆ. ೨೫ರಂದು ಉದ್ಘಾಟನೆಯಾಗಲಿದೆ. ಇದು ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಕನಸಿನ ಯೋಜನೆಯಾಗಿದ್ದು ಭಾನುವಾರ ಲೋಕಾರ್ಪಣೆಯಾಗಲಿದೆ.
ಪಾಲಿಕೆ ಬಜಾರ್ ಅನ್ನು ಭಾನುವಾರ ಸಂಜೆ ೬ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಗೋವಿಂದರಾಜ ಶಾಸಕರಾದ ಪ್ರಿಯಾಕೃಷ್ಣ, ಕಾಂಗ್ರೆಸ್ ಯುವ ಮುಖಂಡರಾದ ಪ್ರದೀಪ್ ಕೃಷ್ಣಪ್ಪ, ಸರ್ಕಾರದ ಸಚಿವರು, ಶಾಸಕರು, ಮುಖಂಡರು ಪಾಲ್ಗೊಳ್ಳುವರು
ಇದು ಅಂಡರ್‌ಗ್ರೌಂಡ್ ಮಾರುಕಟ್ಟೆ ಯಾಗಿದ್ದು, ಹವಾನಿಯಂತ್ರಿತ ಮಾರುಕಟ್ಟೆಯಾಗಿದೆ. ಈ ಹೊಸ ಮಾರುಕಟ್ಟೆ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಸಮೀಪ ಇದ್ದು, ಇದರಲ್ಲಿ ಒಟ್ಟು ೭೯ ಅಂಗಡಿಗಳಿವೆ. ಈಡೀ ಮಾರುಕಟ್ಟೆಯನ್ನು ಸಂಪೂರ್ಣ ಗ್ರಾನೈಟ್ ನಲ್ಲಿ ಪ್ಲೋರಿಂಗ್ ಮಾಡಲಾಗಿದ್ದು, ಸೆನ್ಸರ್ ಹೊಂದಿದ ೩ ಗ್ಲಾಸ್ ಸ್ಲೈಡಿಂಗ್ ಡೋರ್‌ಗಳು, ೨ ಎಸ್ಕಲೇಟರ್‌ಗಳು ಮತ್ತು ಗೂಡ್ಸ್ ಲಿಫ್ಟ್ ಸೌಲಭ್ಯವನ್ನು ಹೊಂದಿದೆ. ಒಟ್ಟು ೨೬ ಒಳಾಂಗಣ ಎಸಿ ಯೂನಿಟ್ಸ್ ಗಳನ್ನೂ ಕಾಣಬಹುದಾಗಿದೆ.
ಅಷ್ಟೇ ಅಲ್ಲದೇ ಒಂದು ಎಲೆಕ್ಟ್ರೀಕಲ್ ರೂಂ, ಒಂದು ಸ್ಟೋರ್ ಹಾಗೂ ಆಫೀಸ್ ರೂಂ, ಒಟ್ಟು ೮ ಎಂಟ್ರಿ ಎಕ್ಸಿಟ್ ಪಾಯಿಂಟ್ ಗಳಿದ್ದು ಸುಲಭ ವಾಗಿ ಪ್ರವೇಶಿಸಬಹುದಾಗಿದೆ.ಪ್ರತಿ ಅಂಗಡಿಗಳಲ್ಲೂ ಅಗ್ನಿ ನಿಯಂತ್ರಕಗಳಿದ್ದು, ಒಳ್ಳೇಯ ಗಾಳಿ, ಬೆಳಕು ಬರುವಂತಿದೆ.
ನಗರೋತ್ಥಾನ ಯೋಜನೆಯಡಿ ಮೊದಲ ಹಂತದಲ್ಲಿ ೫ ಕೋಟಿ ರೂ. ವೆಚ್ಛದಲ್ಲಿ ಹಾಗೂ ಸಿಎಂ ನವ ನಗರೋತ್ಥಾನ ಯೋಜನೆಯಡಿ ಎರಡನೇ ಹಂತದಲ್ಲಿ ೮ ಕೋಟಿ ರೂ. ವೆಚ್ಛದಲ್ಲಿ ಒಟ್ಟು ೧೩ ಕೋಟಿ ರೂ. ವೆಚ್ಛದಲ್ಲಿ ಈ ಸುಸಜ್ಜಿತ, ಅತ್ಯಾಕರ್ಷಕ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.
ನೂತನ ಅಂಡರ್ ಗ್ರೌಂಡ್ ಪಾಲಿಕೆ ಬಜಾರ್ ೧೦೦ ಮೀಟರ್ ಉದ್ದ, ೧೧ ಮೀಟರ್ ಅಗಲ ಇದ್ದು, ೩ ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ. ಪಾದಚಾರಿ ಮಾರ್ಗದ ಎರಡೂ ಬದಿಗೆ ಮಳಿಗೆಗಳನ್ನು ಕಾಣಬಹುದಾಗಿದೆ. ಮಾರುಕಟ್ಟೆಗೆ ಮಳೆನೀರು ನುಗ್ಗದಂತೆ ಅದರ ಸುತ್ತ ಪ್ರತ್ಯೇಕ ಪೈಪ್‌ಲೈನ್ ನಿರ್ಮಿಸಿ ಮಳೆ ನೀರನ್ನು ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿಯುವಂತೆ ಮಾಡಲಾಗಿದೆ.
ಡಿಸೆಂಬರ್ ೨೦೧೯ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇದೀಗ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿದೆ.