ಸುಲಿಗೆ ಇಬ್ಬರ ಬಂಧನ
ಶಿವಮೊಗ್ಗ, ಆ. ೧೩: ಗುಂಪೊಂದು ವ್ಯಕ್ತಿಯೋರ್ವರಿಗೆ ಬೆದರಿಕೆ ಹಾಕಿ ಚಿನ್ನಾಭರಣ ನಗದು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭದ್ರಾವತಿ ನ್ಯೂ ಟೌನ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾವತಿಯ ಅನ್ವರ್ ಕಾಲೋನಿಯ ಮೊಮಿನ್ ಮೊಹಲ್ಲಾ ನಿವಾಸಿ ಜಬೀವುಲ್ಲಾ ಯಾನೆ ಮಲ್ಲಿ (೨೩) ಹಾಗೂ ಮಹಮದ್ ಗೌಸ್ ಯಾನೆ ಗುಂಡಾ (೨೪) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ ೧,೫೦,೦೦೦ ರೂ. ಮೌಲ್ಯದ ೨೪. ೬ ಗ್ರಾಂ ತೂಕದ ಬಂಗಾರದ ಸರ, ಉಂಗುರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ೯-೮-೨೦೨೪ ರಂದು ರಾತ್ರಿ ಭದ್ರಾವತಿಯ ಶಾರದಾ ಮಂದಿರದ ಬಳಿ ನಿಂತಿದ್ದ, ಹುತ್ತಾ ಕಾಲೋನಿ ನಿವಾಸಿ ಮುರುಳೀಧರ್ (೬೪) ಎಂಬುವರನ್ನು, ನಾಲ್ಕೈದು ಯುವಕರು ಬೆದರಿಸಿ ಅವರ ಬಳಿಯಿದ್ದ ಚಿನ್ನದ ಸರ, ಉಂಗುರ, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಡಿವೈಎಸ್ಪಿ ನಾಗರಾಜ್ ಮೇಲ್ವಿಚಾರಣೆಯಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಶೈಲಕುಮಾರ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಟಿ. ರಮೇಶ್, ಭಾರತಿ, ಚಂದ್ರಶೇಖರನಾಯ್ಕ್, ಸಿಬ್ಬಂದಿಗಳಾದ ಎಸ್‌ಐ ಮಂಜಪ್ಪ, ಸಿಹೆಚ್ಸಿ ನವೀನ್, ಸಂತೋಷನಾಯ್ಕ್, ಸಿಪಿಸಿ ಪ್ರಸನ್ನ, ಹಳೇನಗರ ಠಾಣೆ ಸಿಹೆಚ್ಸಿ ಹಾಲಪ್ಪ, ಸಿಪಿಸಿ ಮೌನೇಶ್ ಶಿಕಲ್, ಚಿಕ್ಕಪ್ಪ, ಪ್ರವೀಣ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು.