ಡಾ.ಅಂಬೇಡ್ಕರ್, ಸಂಸತ್ ಭವನ ಫಲಪುಷ್ಪ ಪ್ರದರ್ಶನದ ಆಕರ್ಷಣೆ

ಬೆಂಗಳೂರು, ಆ.೬- ೭೭ನೇ ಸ್ವಾತಂತ್ರ್ಯ ವರ್ಷದ ಅಂಗವಾಗಿ ಇದೇ ತಿಂಗಳ ೮ರಿಂದ ೧೯ರವರೆಗೆ ಒಟ್ಟು ೧೨ ದಿನಗಳ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ವರ್ಷದ ವಿಷಯವಾದ ಸಂಸತ್ ಭವನ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಚೈತ್ಯ ಭೂಮಿ ನೋಡುಗರ ಗಮನ ಸೆಳೆಯಲಿದೆ.
ನಗರದಲ್ಲಿಂದು ಲಾಲ್ ಬಾಗ್
ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸ್ವಾತಂತ್ರ್ಯೋತ್ಸವ ೨೧೬ನೆ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಕೇಂದ್ರ ಬಿಂದು ಆಗಿದ್ದು, ಆರು ಲಕ್ಷ ಹೂವುಗಳನ್ನು ಭಾರತದ ಹೊಸ ಸಂಸದ್ ಭವನದ ಪ್ರತಿಕೃತಿಯನ್ನು ರಚಿಸಲು ಬಳಸಲಾಗುತ್ತಿದೆ ಎಂದರು.
ಅಂತೆಯೇ, ಸುಮಾರು ೩.೪ ಲಕ್ಷ ಡಚ್ ಗುಲಾಬಿಗಳು ಮತ್ತು ಕ್ರೈಸಾಂಥೆಮಮ್‌ಗಳು ಡಾ ಅಂಬೇಡ್ಕರ್ ಅವರ ಜನ್ಮಸ್ಥಳವನ್ನು ಚಿತ್ರಿಸುವ ಪ್ರತಿಷ್ಠಾಪನೆಗೆ ಮತ್ತು ೩.೪ ಲಕ್ಷ ಇದೇ ರೀತಿಯ ಹೂವುಗಳನ್ನು ಡಾ ಅಂಬೇಡ್ಕರ್ ಅವರ ಪ್ರತಿಕೃತಿ ಚೈತ್ಯ ಭೂಮಿ ರಚಿಸಲು ಬಳಸಲಾಗುತ್ತದೆ ಎಂದು ವಿವರಿಸಿದರು.
ಗಾಜಿನಮನೆಗೆ ದೇಶ ವಿದೇಶಗಳಿಂದ ೮೫ ಬಗೆಯ ಹೂವುಗಳು ಆಗಮಿಸಿವೆ. ಈ ವರ್ಷ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ೧೫ ವಿಭಿನ್ನ ವಿಚಾರಗಳನ್ನು ಫಲಪುಷ್ಪ ಪ್ರದರ್ಶನದ ಮೂಲಕ ಬಿಂಬಿಸಲಾಗುವುದು.
ಆಗಸ್ಟ್ ೮ ರಿಂದ ೧೨ ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದೆ. ಮೊದಲ ಆರು ದಿನಗಳ ನಂತರ, ಹೂವುಗಳನ್ನು ಬದಲಾಯಿಸಲಾಗುತ್ತದೆ. ನಂತರ ಮೂರು ಲಕ್ಷ ಹೊಸ ಹೂವುಗಳು ಸಂಸತ್ ಭವನದಲ್ಲಿ, ೧.೭೦ ಲಕ್ಷ ಡಾ ಅಂಬೇಡ್ಕರ್ ಅವರ ಜನ್ಮಸ್ಥಳ ಸ್ಥಾಪನೆಗೆ ಮತ್ತು ೧.೭೦ ಲಕ್ಷ ಚೈತ್ಯ ಭೂಮಿಗೆ ಬಳಕೆಯಾಗುತ್ತದೆ.
ಆಗಸ್ಟ್ ೧೩ರಂದು ಈ ಹೂವುಗಳನ್ನು ಬದಲಾಯಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಲಾಲ್‌ಬಾಗ್ ಸಸ್ಯೋದ್ಯಾನದ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ ತಿಳಿಸಿದರು.
ಅಧಿಕಾರಿಗಳು ೧೦ ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ನಿರೀಕ್ಷಿಸುತ್ತಿದ್ದು, ಅವರಿಗಾಗಿ ಪಾರ್ಕಿಂಗ್, ಭದ್ರತೆ, ಸಿಸಿಟಿವಿ ಕಣ್ಗಾವಲು ಮುಂತಾದ ವಿಸ್ತಾರವಾದ ವ್ಯವಸ್ಥೆಗಳನ್ನು ಯೋಜಿಸಲಾಗಿದೆ. ಗುರುತಿನ ಚೀಟಿಯೊಂದಿಗೆ ಸಮವಸ್ತ್ರದಲ್ಲಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಟಿಕೆಟ್ ದರ ವಯಸ್ಕರಿಗೆ ೮೦ ಮತ್ತು ಮತ್ತು ಮಕ್ಕಳಿಗೆ ೩೦ ರೂಪಾಯಿ ಪ್ರವೇಶ ದರ ಇದೆ ಎಂದೂ ಉಲ್ಲೇಖಿಸಿದರು.