೧೩೦ ಕಿ.ಮೀಗಿಂತ ವೇಗ ಚಲಿಸಿದರೆ ದಂಡ, ಎಫ್‌ಐಆರ್
ಬೆಂಗಳೂರು,ಆ.೧- ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಗಂಟೆಗೆ ೧೩೦ ಕಿ.ಮೀ.ಗಿಂತ ವೇಗವಾಗಿ ಸಂಚರಿಸುವ ಎಲ್ಲಾ ವಿಧದ ವಾಹನ ಚಾಲಕರ ವಿರುದ್ಧ ದಂಡ ಜೊತೆಗೆ ಇಂದಿನಿಂದ ಎಫ್‌ಐಆರ್ ದಾಖಲಿಸಲಾಗುತ್ತಿದೆ.
ರಾಜ್ಯದಲ್ಲಿ ವಾಹನಗಳ ವೇಗ ಮಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರಾಜ್ಯಾದ್ಯಂತ ಗಂಟೆಗೆ ೧೩೦ ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ – ೨೮೧ (ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ) ಆರೋಪದಡಿ ಎಫ್‌ಐಆರ್ ದಾಖಲಿಸುತ್ತಿದ್ದಾರೆ.
೨೦೨೨ರಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ೯೦ ಪ್ರತಿಶತ ಗಂಭೀರ ಅಪಘಾತ ಪ್ರಕರಣಗಳಿಗೆ ಅತಿವೇಗದ ವಾಹನ ಚಾಲನೆ ಕಾರಣ ಎಂಬ ಅಂಶ ಬಯಲಾಗಿತ್ತು. ಅಲ್ಲದೆ ಇತ್ತೀಚೆಗೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಕಾರಿನಲ್ಲಿದ್ದ ಚಾಲಕ ಸಹಿತ ಮೂವರು ಸಾವನ್ನಪ್ಪಿದ್ದರು. ಚಾಲಕ ಗಂಟೆಗೆ ೧೬೦ ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿರುವುದರಿಂದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವುದು ಕಂಡು ಬಂದಿತ್ತು.
ನಿಯಮ ಉಲ್ಲಂಘಿಸುವವರಿಗೆ ೧ ಸಾವಿರ ರೂ. ದಂಡ ಅಥವಾ ೬ ತಿಂಗಳವರೆಗೆ ಸಜೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ಅಪಘಾತ ಪ್ರಕರಣಗಳಿಗೆ ವಾಹನಗಳ ವೇಗ ಕಾರಣವಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸಾಮಾನ್ಯವಾಗಿ ಯಾವುದೇ ವಾಹನದ ವೇಗ ಗಂಟೆಗೆ ೧೨೦ ಕಿ.ಮೀ ಮೀರಿದ ಬಳಿಕ ಅಪಾಯಕಾರಿಯಾಗಬಹುದು. ರಾಜ್ಯದಲ್ಲಿ ಈ ನಿಯಮ ಉಲ್ಲಂಘನೆ ಆಗುತ್ತಿರುವುದರಿಂದ ಆಗಸ್ಟ್ ೧ ರಿಂದ ವೇಗ ಮಿತಿ ಮೀರುವ ಎಲ್ಲಾ ವಿಧದ ವಾಹನಗಳ ಚಾಲಕ/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ನಗರ ಹಾಗೂ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದ್ದು, ಅದರನ್ವಯ ವೇಗದ ಮಿತಿ ಮೀರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಮೊದಲ ಬಾರಿಗೆ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುತ್ತದೆ. ಎರಡು ಅಥವಾ ಮೂರಕ್ಕಿಂತಲೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ನ್ಯಾಯಾಂಗ ಬಂಧನವಾಗುವ ಸಾಧ್ಯತೆಯೂ ಇರಲಿದೆ” ಎಂದು ವಿವರಿಸಿದರು.
ಸವಾಲುಗಳೇನು:
ನೂತನ ನಿಯಮ ಅನುಷ್ಠಾನಕ್ಕೆ ಇರುವ ಕೆಲ ಸವಾಲುಗಳ ಕುರಿತು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ”ಬೆಂಗಳೂರು – ಮೈಸೂರು ರಸ್ತೆ, ಏರ್‌ಪೋರ್ಟ್ ರಸ್ತೆ ಸೇರಿದಂತೆ ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ ವೇಗ ಮಿತಿ ಮೀರುವವರ ವಿರುದ್ಧ ಅತ್ಯಾಧುನಿಕ ಕ್ಯಾಮರಾಗಳ ಸಹಾಯದಿಂದ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದರು.
ಇನ್ನೂ ಕೆಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಪೂರ್ಣವಾಗಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲ. ಅಂಥಹ ರಸ್ತೆಗಳಲ್ಲಿ ಹಗಲಿನಲ್ಲಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸುವ ಮೂಲಕ ವೇಗ ಮಿತಿ ಮೀರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದು. ಅದೇ ರಾತ್ರಿ ಸಂದರ್ಭದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವುದೂ ಸಹ ಕಷ್ಟ ಸಾಧ್ಯವಾಗುವುದರಿಂದ ಸ್ವಲ್ಪ ಸವಾಲು ಎನಿಸಬಹುದು. ಆದರೂ ಸಹ ಸಾಧ್ಯವಾದಷ್ಟು ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರ ಪ್ರಯತ್ನ ನಿರಂತರವಾಗಿರಲಿದೆ” ಎಂದು ತಿಳಿಸಿದರು.