ಪೆಟ್ರೋಲ್, ಹಾಲಿನ ಬೆಲೆ ಇಳಿಸಲು ಒತ್ತಾಯ
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.30: ಅವೈಜ್ಞಾನಿಕವಾಗಿ ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆ ಏರಿಸಿರುವ ರಾಜ್ಯ ಸರ್ಕಾರ ಈ ಕೂಡಲೇ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‍ಐ ಸಂಘಟನೆ ವತಿಯಿಂದ ಶನಿವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 50 ಎಂಎಲ್ ಹಾಲನ್ನು ಉಚಿತ ನೀಡುತೇವೆ, ಬೆಲೆ ಏರಿಕೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಇದು ನಂಬಲು ಅನರ್ಹವಾಗಿದ್ದು, ಬದಲಿಗೆ ರೈತರಿಗೆ, ರಸಗೊಬ್ಬರ, ಬಿತ್ತನೆ ಬೀಜ, ಜಾನುವಾರುಗಳಿಗೆ ಮೇವು , ಪೋಷಣೆಗೆ ಬೇಕಾದ ಚಿಕೆತ್ಸೆ, ಆಹಾರ ಒದಗಿಸಲು ಮುಂದಾಗಬೇಕು. ಬೆಲೆ ಏರಿಕೆಯಿಂದ ರೈತರ ಬಲವರ್ಧನೆ ಸಾಧ್ಯವಿಲ್ಲ ಎಂದು ದೂರಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಕಾಂಗ್ರೆಸ್ ಸರ್ಕಾರದಿಂದ ಮುಕ್ತಿ ಸಿಗಬಹುದು ಎನ್ನುವ ಆಶಯ ಹೊಂದಿದ್ದರು. ಈಗ ಬಿಜೆಪಿಯ ಇನ್ನೊಂದು ಮುಖದಂತೆ ಕಾಂಗ್ರೆಸ್ ವರ್ತನೆ ಮಾಡುತ್ತಿದೆ. ಈ ಬಗ್ಗೆ ಸಚಿವರು ಶಾಸಕರು ಧ್ವನಿ ಎತ್ತಬೇಕು, ಬೆಲೆ ಇಳಿಸಲು ಮುಂದಾಗಬೇಕು, ನೀಟ್ ಪರೀಕ್ಷೆ ಅವ್ಯವಹಾರ ಸಮಗ್ರ ತನಿಖೆ ನಡೆಸಬೇಕು. ಸಿಬಿಐ ತನಿಖೆಯ ಹಾದಿ ಸಮಗ್ರವಾಗಿ ನಡೆಯಬೇಕು ಮತ್ತು ಆಯಾ ರಾಜ್ಯ ಪಠ್ಯ ಕ್ರಮಗಳಂತೆ ನೀಟ್ ಪರೀಕ್ಷೆ ನಡೆಸಲು ಮುಂದಾಗಬೇಕು. ಸಿಬಿಎಸ್ಇ ಪಠ್ಯ ಕ್ರಮದಂತೆ ಪ್ರಶ್ನೆಪತ್ರಿಕೆ ತಯಾರಿಸುವ ವಿಧಾನವನ್ನು ಕೈ ಬಿಡಬೇಕು, ಆಯಾ ರಾಜ್ಯ ಸರ್ಕಾರಗಳಿಗೆ ನೀಟ್ ಪರೀಕ್ಷೆ ನಡೆಸುವ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾಯಿಸಿದರು.
ಡಿವೈಎಫ್‍ಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಮುಖಂಡರಾದ ವಿ.ಸ್ವಾಮಿ, ಪವನ್, ನಿಖಿಲ್, ಸುಧಾಕರ್, ಬಸವರಾಜ್, ಶಿವು, ದುರ್ಗೆಶ, ಲೋಕೇಶ್ ಮತ್ತಿತರರಿದ್ದರು.
One attachment • Scanned by Gmail