ಡೆಂಗ್ಯೂ ನಿಯಂತ್ರಣಕ್ಕೆ ಲಾರ್ವಾ ಸಮೀಕ್ಷೆ ಪರೀಕ್ಷೆ ಅವಶ್ಯಕ
ಕರಜಗಿ :ಜೂ.29:ಡೆಂಗ್ಯೂ ನಿಯಂತ್ರಣಕ್ಕೆ ಗುಣಾತ್ಮಕ ಲಾರ್ವಾ ಸಮೀಕ್ಷೆ, ಅವಶ್ಯಕವಾಗಿದೆ ಎಂದು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂಜೀವಿನಿ ಜಾಧವ ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕಲಬುರಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವರ ಸಹಯೋಗದಲ್ಲಿ ಮಣ್ಣೂರ ಗ್ರಾಮದಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ಹಮ್ಮಿಕೊಂಡಿದ್ದ ಲಾರ್ವಾ ಸಮೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಮಾರ್ಗದರ್ಶನದಲ್ಲಿ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಎಲ್ಲಾ ವಾರ್ಡ್ ಗಳಲ್ಲಿ ವಿಶೇಷ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ
ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ,ನೀಡಿ ಲಾರ್ವಾ ಸಮೀಕ್ಷೆ, ಜ್ವರ ಪರೀಕ್ಷೆ ಅಲ್ಲಲ್ಲಿ ಗುಂಪು ಸಭೆಯ ಮೂಲಕ ಡೆಂಗ್ಯೂ ನಿಯಂತ್ರಣ ಮಾಹಿತಿ ನೀಡುವುದರ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು ಆರೋಗ್ಯ ನಿರೀಕ್ಷಣಾಧಿಕಾರಿ ವಿಠ್ಠಲ ಬಡಿಗೇರ ಮಾತನಾಡಿ ನಾವು ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಘನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಬೇಕು. ಹಂಚು, ಒಡೆದ ಮಡಕೆ, ಪ್ಲಾಸ್ಟಿಕ್ ಬಾಟಲ್, ಎಳನೀರಿನ ಚಿಪ್ಪು ಇವುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗದಂತೆ ನೋಡಿಕೊಳ್ಳಬೇಕು.ಹೂವಿನ ಗಿಡಗಳ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡೆಂಗ್ಯೂ ಬಗ್ಗೆ ಆತಂಕ ಭಯ ಬೇಡ. ವಾರಕ್ಕೊಮ್ಮೆಯಾದರೂ ನೀರು ಸಂಗ್ರಹಿಸುವ ತೊಟ್ಟಿ ಟ್ಯಾಂಕ್ ಬ್ಯಾರೆಲ್ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಬೇಕು. ತೀವ್ರ ಜ್ವರ, ತಲೆನೋವು ಕಣ್ಣಿನ ಹಿಂಭಾಗ ನೋವು, ಮೈಕೈ ನೋವು ಕಂಡು ಬಂದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ, ಚಿಕಿತ್ಸೆ ಸಲಹೆ ಪಡೆದುಕೊಳ್ಳಬೇಕು.ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು.ಮಾರಣಾಂತಿಕ ಡೆಂಗ್ಯೂ ನಿಯಂತ್ರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಮೇಘಾ ಕಲಶೆಟ್ಟಿ ಮುಖಂಡರಾದ ಚಂದ್ರಕಾಂತ ದೈತನ ಮಲಕಣ್ಣ ಹೊಸೂರಕರ ಆಸ್ಪತ್ರೆ ಸಿಬ್ಬಂದಿ ವಿಠ್ಠಲ ಬಡಿಗೇರ ಸುಕನ್ಯಾ ಕರಜಗಿ ಹಣಮಂತ ಅಲ್ಲಾಪೂರ ಗುರುಪಾದ ಬಿಲ್ಲಾಡ ಶಿವಾನಂದ ಅಂದೇವಾಡಿ ಸುಮಂಗಲಾ ಕಾಂಬಳೆ ಶ್ರೀಶೈಲ ಖೇಡಗಿ ಆಕಾಶ ಮುಜಗೊಂಡ ಆಶಾ ಕಾರ್ಯಕರ್ತೆ ಗೌರಾಬಾಯಿ ಮೋಸಲಗಿ ಗ್ರಾ ಪಂ ಸಿಬ್ಬಂದಿ ಶಿವಲಿಂಗೇಶ್ವರ ಜಾಲವಾದಿ ಮಲ್ಲಪ್ಪ ಜಮಾದಾರ ಭಾಗೇಶ ಪ್ಯಾಟಿ ಇತರರಿದ್ದರು