ಸರ್ಕಾರಿ ಶಾಲೆ ಮಕ್ಕಳ ಡಿಮ್ಯಾಂಡ್ : ಶಿಕ್ಷಣ ಸಚಿವರ ರೆಸ್ಪಾನ್ಸ್ – ಚಪ್ಪಾಳೆ ತಟ್ಟಿ ಅಭಿನಂದಿಸಿದ ಸಭಿಕರು!
ಶಿವಮೊಗ್ಗ, ಜೂ. 29; ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನ ಸ್ಪಂದನ ಸಭೆಯು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸರ್ಕಾರಿ ಶಾಲೆಯೊಂದರ ಮಕ್ಕಳು ಸಲ್ಲಿಸಿದ ಮನವಿಯು ಸಭಿಕರ ಗಮನ ಸೆಳೆಯಿತು. ಸಭಾಂಗಣದಲ್ಲಿದ್ದ ಸಭಿಕರು ಚಪ್ಪಾಳೆ ತಟ್ಟಿ ಮಕ್ಕಳಿಗೆ ಅಭಿನಂದಿಸಿದ ಘಟನೆಯೂ ನಡೆಯಿತು. ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ಮೌಲಾನಾ ಆಜಾದ್ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಜನ ಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದರು. ‘ಶಾಲೆ ಆರಂಭವಾಗಿ ಎರಡು ವರ್ಷವಾದರೂ ಬಿಸಿಯೂಟ ವ್ಯವಸ್ಥೆ ಆರಂಭಿಸಿಲ್ಲ. ಹಾಲು, ಮೊಟ್ಟೆ ವಿತರಣೆ ಮಾಡುತ್ತಿಲ್ಲ.ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ. ಹಿಂದಿ ಭಾಷೆಯ ಶಿಕ್ಷಕರ ನೇಮಕವಾಗಿಲ್ಲ. ಕಂಪ್ಯೂಟರ್ ಶಿಕ್ಷಣವಿಲ್ಲ. ಆಟದ ಮೈದಾನವಿಲ್ಲ ಎಂದು ಹೇಳಿ ಸಚಿವರ ಮಧು ಬಂಗಾರಪ್ಪರಿಗೆ ಮನವಿ ಪತ್ರ ಅರ್ಪಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರು, ಅಧಿಕಾರಿಗಳ ವಿರುದ್ದ ಕೆಲ ಕ್ಷಣ ಗರಂಗೊಂಡರು!ಬಿಸಿಯೂಟ, ಹಾಲು, ಮೊಟ್ಟೆ ವಿತರಣೆ ಏಕೆ ಮಾಡುತ್ತಿಲ್ಲ?’ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಶಾಲೆ ಕಾರ್ಯನಿರ್ವಹಣೆ ಮಾಡುತ್ತಿದೆ. ಸದರಿ ಇಲಾಖೆಯ ಮೂಲಕ ಸೌಲಭ್ಯಗಳು ಅನುಷ್ಠಾನವಾಗ ಬೇಕಾಗಿದೆ ಎಂದು ಅಧಿಕಾರಿಗಳು ಉತ್ತರ ನೀಡಿದರು.ಸಚಿವರು ಮಾತನಾಡಿ, ‘ತತ್’ಕ್ಷಣವೇ ಸದರಿ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಇಲಾಖೆಯ ಮೂಲಕವೇ ಮೊಟ್ಟೆ, ಹಾಲು ವಿತರಣೆ ಮಾಡಬೇಕು’ ಎಂದು ಡಿಡಿಪಿಐಗೆ ಸೂಚಿಸಿದರು. ಕಾಲಮಿತಿಯೊಳಗೆ ಬಿಸಿಯೂಟ ಆರಂಭಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಆದೇಶಿಸಿದರು. ಹಿಂದಿ ಭಾಷೆ ಶಿಕ್ಷಕರ ನೇಮಕ ಮತ್ತೀತರ ವಿಷಯಗಳ ಕುರಿತಂತೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕ್ರಮಕೈಗೊಳ್ಳುವುದಾಗಿ ಸಚಿವರು ಮಕ್ಕಳಿಗೆ ಭರವಸೆ ನೀಡಿದರು. ಸಚಿವರ ಸಕಾರಾತ್ಮಕ ಸ್ಪಂದನೆಗೆ ಮಕ್ಕಳು ಧನ್ಯವಾದ ಅರ್ಪಿಸಿದರು. ಮಕ್ಕಳು ವೇದಿಕೆಯಿಂದ ನಿರ್ಗಮಿಸುವಾಗ ಸಭಾಂಗಣದಲ್ಲಿದ್ದ ಸಭಿಕರು ಚಪ್ಪಾಳೆ ತಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದರು.ಸೌಲಭ್ಯಗಳಿಲ್ಲ : ಮೌಲಾನಾ ಆಜಾದ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇತರೆ ಸರ್ಕಾರಿ ಶಾಲೆಗಳ ಮಕ್ಕಳ ರೀತಿಯಲ್ಲಿ ಬಿಸಿಯೂಟ, ಬಾಳೆಹಣ್ಣು, ಹಾಲು ಸೇರಿದಂತೆ ಯಾವುದೇ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಹಿಂದಿ ಭಾಷೆಯ ಶಿಕ್ಷಕರೇ ನೇಮಕವಾಗಿಲ್ಲ. ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಆಟದ ಮೈದಾನವಿಲ್ಲ. ಕಂಪ್ಯೂಟರ್ ಶಿಕ್ಷಣವೂ ಇಲ್ಲವಾಗಿದೆ.ಸದರಿ ಶಾಲೆಯ ಮಕ್ಕಳು ಪಕ್ಷಪಾತ ಧೋರಣೆಗೆ ಒಳಗಾಗಿದ್ದಾರೆ. ನ್ಯಾಯಬದ್ದ ಹಕ್ಕುಗಳಿಂದ ಬಡ, ಮಧ್ಯಮ ವರ್ಗದ ಕುಟುಂಬದ ಮಕ್ಕಳು ವಂಚಿತವಾಗುವಂತಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕೆ ಚಟುವಟಿಕೆ ಮೇಲೆ ಪರಿಣಾಮ ಬೀರುವಂತಾಗಿದೆ. ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ ಎಂದು ಕೆಲ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.