ವಿಜ್ಞಾನ-ತಂತ್ರಜ್ಞಾನದಿಂದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ
ತುಮಕೂರು, ಜೂ. ೨೯- ದೇಶದ ಮುಂದಿರುವ ಹಲವಾರು ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತಹ ದೊಡ್ಡ ಸವಾಲು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಮುಂದಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸದಸ್ಯ ಹಾಗು ಎಟ್ರಿಯಾ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ಕಾಲೇಜಿನ ಡೀನ್ ಡಾ.ಹೆಚ್.ಬಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.
ನಗರದ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ
“ಎಮರಜಿಂಗ್ ಟೆಕ್ನಾಲಜಿಸ್ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ” ಎಂಬ ಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆಗಳು ಸಮಾಜದ ಒಳಿತನ್ನು ಬಯಸುವುದರ ಜತೆಗೆ ಜನತೆಗೆ ಶಿಕ್ಷಣ, ಹವಾಮಾನ ವೈಪರೀತ್ಯ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ. ಆ ಮೂಲಕ ಜನರಿಗೆ ಪೂರಕ ಹೊಸ ಹೊಸ ಕಾಯಿದೆಗಳ ಜಾರಿಗೆ ನೆರವಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಂಶೋಧನೆ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನದ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಲಾಗುತ್ತಿದೆ. ಅದರಲ್ಲೂ ಆರೋಗ್ತ ಕ್ಷೇತ್ರದಲ್ಲಿ ಬಹಳ ಬದಲಾವಣೆಗೆ ಕಾರಣವಾಗಿದೆ. ವಾಚ್‌ನಲ್ಲಿ ಪಲ್ಸ್ ರೇಟ್ ಸೇರಿದಂತೆ ವೈದ್ಯಕೀಯ ಹಲವು ಸೌಲಭ್ಯ ದೊರೆಯುತ್ತಿದೆ. ಇದರಿಂದ ಸಮಯದ ಉಳಿತಾಯದ ಜತೆಗೆ ಹಣವೂ ಉಳಿಯುತ್ತಿದೆ. ಬಯೋ ಮೆಡಿಕಲ್ ಕ್ಷೇತ್ರದಲ್ಲಿ ತಂತ್ರಜ್ಞಾನ ಅಪಾರವಾದ ಕ್ರಾಂತಿ ಮಾಡಿದೆ. ಇದರ ಜತೆಗೆ ಕೃತಕ ಬುದ್ಧಿಮತ್ತೆ ಸಹ ಬಹಳ ವೇಗದಲ್ಲಿ ಬಳಕೆಯಾಗುತ್ತಿದೆ. ಇದರಿಂದ ಬೇರೆಯವರ ಉದ್ಯೋಗ ಕಸಿಯುತ್ತದೆ ಎಂಬ ಮಾತು ಒಪ್ಪಲು ಸಾಧ್ಯವಿಲ್ಲ ಎಂದರು.
ಕಂಪ್ಯೂಟರ್ ಬಂದಾಗಲು ಇದೇ ರೀತಿಯ ಅನುಮಾನಗಳು ಕಾಡಿದ್ದವು. ಆದರೆ ಐಟಿ ಕ್ಷೇತ್ರದಲ್ಲಿಯೇ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ನೆಟ್‌ವರ್ಕ್ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಜನರಿಗೆ ಹೆಚ್ಚು ಉಪಯೋಗವಾಗುತ್ತಿದೆ ಎಂದು ಹೇಳಿದರು.
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಆದರೆ ಕೌಶಲ್ಯ ಹೊಂದಿದ ವಿದ್ಯಾವಂತರ ಕೊರತೆಯಿದೆ. ಸರಿಯಾದ ಮಾಹಿತಿ ಕಲೆಹಾಕಿ ಅದನ್ನು ಜ್ಞಾನವಾಗಿ ಪರಿವರ್ತಿಸಿಕೊಂಡು ಆ ಮೂಲಕ ತಮ್ಮ ಗುರಿಯನ್ನು ತಲುಪಲು ವಿದ್ಯಾರ್ಥಿಗಳು ಪ್ರಯತ್ನಿಸಿಸಬೇಕೆಂದು ಸಲಹೆ ನೀಡಿದ ಅವರು, ಹಿಂದೆ ಹೊಸ ಕೋರ್ಸುಗಳು ಬಂದಾಗ ಬೋಧಕರ ಕೊರತೆ ಎದುರಾಗುತ್ತಿತ್ತು.ಆದರೆ ಇಂದು ಆ ಪರಿಸ್ಥಿತಿ ಇಲ್ಲ. ವಿಟಿಯು ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲಾ ವಿಷಯಗಳಿಗೆ ಅಗತ್ಯವಾದ ಶಿಕ್ಷಕರಿಗೆ ತರಬೇತಿ ನೀಡಿ ಕೊರತೆಯನ್ನು ನೀಗಿಸಿದೆ. ಇದರ ಜತೆಗೆ ಸಂಗೀತ, ಯೋಗ, ಎನ್.ಎಸ್.ಎಸ್, ಎನ್.ಸಿ.ಸಿ ಯಂತಹ ವಿಷಯಗಳ ಬಗ್ಗೆಯೂ ಮಕ್ಕಳಲ್ಲಿ ಆಸಕ್ತಿ ಬೆಳೆಸಿ, ಅವರಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ ಡಾ.ಶಿವಕುಮಾರ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಸ್ರೋ ಚಂದ್ರಯಾನ-೦೩ ಮೂಲಕ ಚಂದ್ರನ ದಕ್ಷಿಣ ದೃವದಲ್ಲಿ ಉಪಗ್ರಹ ಇಳಿಸಿ, ಮಾನವರು ಬದುಕಲು ಅಗತ್ಯವಿರುವ ವಾತಾವರಣ ಇದೆಯೇ ಎಂಬುದರ ಬಗ್ಗೆ ಉಳಿದ ದೇಶಗಳಿಗಿಂತ ಹೆಚ್ಚು ನಿಖರವಾಗಿ ಸಂಶೋಧನೆಗೆ ಒಳಪಡಿಸಿದೆ. ಇದಕ್ಕೆ ಹೆಚ್ಚಿನ ಅರ್ಥಿಕ ಸಹಕಾರ ಅಗತ್ಯವಿದ್ದು, ಸರ್ಕಾರಗಳು ಕೈ ಜೋಡಿಸಿವೆ. ನಮ್ಮ ಕಾಲೇಜಿನಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಒಂದೊಂದು ವಿಷಯಗಳಿಗೆ ಸಂಶೋಧನಾಗಾಗಿ ಹತ್ತು ಲಕ್ಷ ರೂಗಳ ಧನ ಸಹಾಯ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ನೀವೆಲ್ಲರೂ ಬಳಕೆ ಮಾಡಿಕೊಂಡು ಕಾಲೇಜಿಗೆ ಒಳ್ಳೆಯ ಹೆಸರು ತರಬೇಕೆಂದು ಸಲಹೆ ನೀಡಿದರು.
ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಐಐಎಸ್ಟಿ ಕೇರಳದ ಸಹ ಮುಖ್ಯಸ್ಥ ಡಾ. ಮನೋಜ್ ಬಿ.ಎಸ್., ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಬೆಳೆವಣಿಗೆಯಾಗುತ್ತಿದ್ದು, ೨೦೩೦ಕ್ಕೆ ೬ಜಿ ತರಂಗಾಂತರ ಅಭಿವೃದ್ಧಿಪಡಿಸಿ ಅದರ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮುಂದಾಗಿದೆ. ೬ ಜಿ.ತರಂಗಾಂತರದಿಂದ ಹಾಲಿ ಇರುವ ವೇಗಕ್ಕಿಂತ ಎರಡು ಪಟ್ಟು ವೇಗದ ಜತೆಗೆ, ನಿಖರತೆಯೂ ದೊರೆಯಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ತನ್ನದೆ ಆದ ಸ್ಪೇಸ್ ಸ್ಟೇಷನ್ ಹೊಂದುವ ಗುರಿ ಸಹ ಕೈಗೂಡಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎಐಟಿ ಪ್ರಾಚಾರ್ಯರಾದ ಡಾ.ಕೆ.ವಿ.ಶ್ರೀನಿವಾಸರಾವ್, ಕಳೆದ ೮-೧೦ ತಿಂಗಳಿನಿಂದ ನಮ್ಮ ಎಲ್ಲಾ ಸಿಬ್ಬಂದಿ ಕಷ್ಟಪಟ್ಟು ನಿರಂತರ ಪರಿಶ್ರಮದಿಂದ ಈ ಸಮ್ಮೇಳನ ಏರ್ಪಡಿಸಿದ್ದೇವೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಮಾಹಿತಿ ವಿನಿಯೋಗಕ್ಕೆ ಇದು ಒಳ್ಳೆಯ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಶೋಭಾ, ಸಮ್ಮೇಳನ ಅಯೋಜನಾ ಸಮಿತಿ ಮುಖ್ಯಸ್ಥ ಹಾಗೂ ಡೀನ್ ಡಾ.ಎಲ್.ಯತೀಶ್, ಸಹ ಮುಖ್ಯಸ್ಥರಾದ ಡಾ.ಸುಹಾಸ್ ಕೆ., ಸಂಯೋಜಕಿ ಪ್ರೊ. ಪದ್ಮಾವತಿ, ವಿವಿಧ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಶ್ಥರಾದ ಡಾ.ನಾಗೇಂದ್ರಕುಮಾರ್, ಡಾ.ಪುಷ್ಪ, ಚಂದ್ರಶೇಖರ್, ನಾಗನಗೌಡ, ರಾಕೇಶ್, ಸಣ್ಣ ಮಾರೇಗೌಡ, ಮೋಹನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.