ಪೌಷ್ಟಿಕತೆ ಕುರಿತು ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ : ಯಾದವಾಡ
ಔರಾದ : ಸೆ.26:ಅಪೌಷ್ಟಿಕತೆಯಿಂದ ಅನೇಕ ಮಹಿಳೆಯರು ಮತ್ತು ಮಕ್ಕಳು ಅಕಾಲ ಮೃತ್ಯುವಿಗೆ ಒಳಗಾಗುತ್ತಿದ್ದು, ಈ ನಿಟ್ಟಿನಲ್ಲಿ ಪೌಷ್ಟಿಕಾಂಶ ಆಹಾರ ಕ್ರಮ ಮತ್ತು ಅಪೌಷ್ಟಿಕತೆಗೆ ಕಾರಣಗಳೇನು ಎನ್ನುವ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿ ಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಜಿ ಹುಸೇನಸಾಬ ಯಾದವಾಡ ಹೇಳಿದರು.
ಮಂಗಳವಾರ ತಾಲೂಕಿನ ಮಾನಸಿಂಗ್ ತಾಂಡಾದಲ್ಲಿ ತಾಲುಕು ಕಾನೂನು ಸೇವೆಗಳ ಸಮಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂತಪುರ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಪೆÇೀಷಣಾ ಅಭಿಯಾನ ಮಾಸಾಚರಣೆ 2024ರ ಪೌಷ್ಠಿಕ ಆಹಾರ ಸೇವನೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರ ರಾಷ್ಟ್ರಗಳಂತೆ ಜನತೆ ಹಸಿವಿನಿಂದ ಬಳಲಬಾರದು. ಆಫ್ರಿಕಾದಲ್ಲಿ ಇಂದಿಗೂ ಜನತೆಗೆ ತಿನ್ನಲು ಆಹಾರ ಸಿಗುತ್ತಿಲ್ಲ ಎನ್ನುವುದು ನೋವಿನ ಸಂಗತಿ. ಜನರು ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಜನರಲ್ಲಿ ಪೌಷ್ಟಿಕ ಆಹಾರದ ಬಗ್ಗೆ ತರಬೇತಿ, ಕಾರ್ಯಾಗಾರ, ಸ್ಪರ್ಧೆ ಹಾಗೂ ಜಾಗೃತಿ ಜಾಥಾಗಳು ಇನ್ನು ಹೆಚ್ಚು ಹೆಚ್ಚು ನಡೆಯಬೇಕು ಇದರಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿಕೆ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಬೇಕಾದರೆ ಪೌಷ್ಟಿಕ ಆಹಾರದಿಂದ ಮಾತ್ರ ಸಾಧ್ಯ. ನಮ್ಮಲ್ಲಿ ಆಹಾರ ಉತ್ಪಾದನೆಯ ಕೊರತೆ ಇಲ್ಲ, ಆದರೆ ಎಲ್ಲರಿಗೂ ಸಮರ್ಪಕವಾಗಿ ಮುಟ್ಟುವಂತಾಗಬೇಕೆಂದು. ಗ್ರಾಮೀಣ ಭಾಗದಲ್ಲಿ ಜನತೆ ಮತ್ತು ಮಹಿಳೆಯರ , ಮಕ್ಕಳ ಪೌಷ್ಠಿಕಾಂಶ ಕೊರತೆಯಾಗದಂತೆ ಇಲಾಖೆಯಿಂದ ಅನೇಕ ಯೋಜನೆಗಳು ಜಾರಿಯಲ್ಲಿವೆ. ಸಾರ್ವಜನಿಕರು ಇವುಗಳ ಸದುಪಯೋಗಪಡೆದುಕೊಂಡು ಸ್ವಾಸ್ಥ್ಯ ಜೀವನ ಸಾಗಿಸಬೇಕು. 15ರಿಂದ 19 ವಯಸ್ಸಿನ ಶೇ.55 ಪ್ರತಿಶತ ಯುವತಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಜಂಕ್‍ಫುಡ್, ಫಾಸ್ಟಫುಡ್ ಮುಂತಾದವುಗಳ ವ್ಯಾಮೋಹಕ್ಕೆ ಹದಿ ಹರೆಯದವರು ಅಪೌಷ್ಠಿಕತೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪಾಲಕರು ಸಹ ಎಚ್ಚರಿವಹಿಸಬೇಕೆಂದರು.
ಈ ಸಂದರ್ಭದಲ್ಲಿ ನ್ಯಾಯಧೀಶ ಜ್ಞಾನೇಶ್ವರ ವಿ. ಮಾಳಗಿ, ಸಹಾಯಕ ಸರಕಾರಿ ಅಭಿಯೋಜಕ ಶಿವಾನಂದ ಹುಲೆನ್ನವರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಸಂದೀಪ್ ಮೇತ್ರೆ, ಮಿನಾಕ್ಷಿ ಪಾಂಚಾಳ್ ಇತರರಿದ್ದರು.