ಕನ್ನಡದಲ್ಲಿ ಸಾಗರ್ ಖಂಡ್ರೆ ಪ್ರಮಾಣ ವಚನ: ಕರವೇ ಸಂತಸ
ಬೀದರ್:ಜೂ.25: ನವದೆಹಲಿಯ ಸಂಸತ್ ಭವನದಲ್ಲಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಬೀದರನ ನೂತನ ಸಂಸದ ಸಾಗರ್ ಖಂಡ್ರೆ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಂತಸ ವ್ಯಕ್ತಪಡಿಸಿದೆ.
ಸಾಗರ್ ಖಂಡ್ರೆ ಅವರು ಮಾತೃಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದ್ದಾರೆ.
ಸಾಗರ್ ಖಂಡ್ರೆ ಅವರ ಕನ್ನಡ ಪ್ರೇಮ ಇತರರಿಗೆ ಮಾದರಿಯಾಗಿದೆ. ಅವರು ತಮ್ಮ ಅಧಿಕಾರ ಅವಧಿಯಲ್ಲಿ ಸಂಸತ್ತಿನಲ್ಲಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.