ರಾಷ್ಟ್ರ ಮತ್ತು ಸಮುದಾಯವನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಶಿಕ್ಷಣ ತಜ್ಞರ ಪಾತ್ರ ಮುಖ್ಯ:ಡಾ. ಪ್ರಶಾಂತ
ವಿಜಯಪುರ, ಜೂ. 24: ಯಾವುದೇ ಒಂದು ಕಾರ್ಯ ಯಶಸ್ವಿಯಾಗಲು ಯೋಜನೆ ಹಾಗೂ ನಿರ್ವಹಣೆ ಮುಖ್ಯ. ಅದರಂತೆ ರಾಷ್ಟ್ರ ಮತ್ತು ಸಮುದಾಯವನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಶಿಕ್ಷಣ ತಜ್ಞರ ಪಾತ್ರ ಪ್ರಮುಖವಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವ್ಯವಸ್ಥಾಪಕ ಡಾ. ಪ್ರಶಾಂತ ಪಿ. ಕೆ. ಎಂ ಹೇಳಿದ್ದಾರೆ.
ನಗರದ ಎ. ಎಸ್. ಪಾಟೀಲ ಮಹಾವಿದ್ಯಾಲದ ಎಂಬಿಎ ವಿಭಾಗವು ಆಯೋಜಿಸಿದ್ದ ‘ದಿ. ಯುಗ ಆಫ್ ಸಾಮ್ರಾಜ್ಯಯಂ’ (ಸಿದ್ಧತ್ವ) ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ನಿರ್ವಹಣೆ ಉತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿ. ಎಲ್. ಡಿ. ಇ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, ಸಿದ್ದಾಂತ, ತಂತ್ರ, ವಿದ್ಯೆ ಮತ್ತು ಕೌಶಲ್ಯ ತತ್ವಗಳನ್ನು ಬಳಸಿಕೊಳ್ಳಬೇಕು. ಯೋಜನೆಗಳ ಯಶಸ್ಸಿಗೆ ಬೇಕಾದ ಉತ್ತಮ ನಿರ್ವಹಣೆಯ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಬಿ. ಎಸ್. ಬೆಳಗಲಿ ಮಾತನಾಡಿ, ಇಂಥ ಉತ್ಸವಗಳು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ನಿರ್ಮಾಣ ಮಾಡಲು ಮತ್ತು ಸ್ವಾವಲಂಬನ ಜೀವನ ನಡೆಸಲು ಮಾರ್ಗದರ್ಶಿಯಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಯೋಜಕಿ ಪ್ರೊ. ರಶ್ಮಿ. ಎಸ್. ಪಾಟೀಲ, ವಿದ್ಯಾರ್ಥಿಗಳ ಕಾರ್ಯಕ್ರಮ ಸಂಯೋಜಕ ಅಚಲ್ ಜೈನ್, ಕಾಲೇಜಿನ ಪ್ರಧಾನ ಕಾರ್ಯದರ್ಶಿ ನಮನ ದುಬೆ, ನಾನಾ ಕಾಲೇಜುಗಳ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಮುಂತಾದವರು ಉಪಸ್ಥಿತರಿದ್ದರು.
ಎಂಬಿಎ ವಿಭಾಗದ ನಿರ್ದೇಶಕ ಡಾ. ಚಿದಾನಂದ ಜಿ. ಬ್ಯಾಹಟ್ಟಿ ಸ್ವಾಗತಿಸಿ, ಪರಿಚಯಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ಮುರಗೇಶ ಪಟ್ಟಣಶೆಟ್ಟಿ ನಿರೂಪಿಸಿದರು. ಸಂಯೋಜಕ ಖದೀರ ಕೊಲ್ಹಾರ ವಂದಿಸಿದರು.