ತೀರ್ಥಹಳ್ಳಿಯಲ್ಲಿ ಸುಸಜ್ಜಿತವಾದ ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲಿ ಪ್ರಾರಂಭ.
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೨೪: ಬಹುದಿನಗಳ ಪರಿಶ್ರಮ, ಮಲೆನಾಡಿನ ಭಾಗದ ಜನರ ಅಪೇಕ್ಷೆ ತೀರ್ಥಹಳ್ಳಿಯಲ್ಲಿ ಒಂದು ಕ್ಯಾನ್ಸರ್ ಆಸ್ಪತ್ರೆ ಬೇಕು ಎಂಬ ಆಶಯಕ್ಕೆ ಸ್ಪಂದಿಸಿದವರು ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಆಡಳಿತ ಮಂಡಳಿಯವರು ಎಂದು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ‘ಅಂತರAಗ’  ಪತ್ರಿಕೆಯ ಸಂಪಾದಕರಾದ ಟಿ.ಕೆ.ರಮೇಶ್ ಶೆಟ್ಟಿ ತಿಳಿಸಿದರು.ಅವರು ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಅಸ್ಪತ್ರೆಯ ಆಡಳಿತ  ನಿರ್ದೆಶಕರಾದ ಡಾ. ಡಿ. ಸುರೇಶ್ ರಾವ್ ಜೊತೆ ತೀರ್ಥಹಳ್ಳಿಯಲ್ಲಿ ಭವ್ಯವಾಗಿ ನಿರ್ಮಿಸುತ್ತಿರುವ ಕಟ್ಟಡದ ಕಾಮಗಾರಿ ವೀಕ್ಷಣೆ ನಂತರ ಸಂವಾದ ಸಭೆಯಲ್ಲಿ ಮಾತನಾಡುತ್ತ  ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಮತ್ತು ಚಿಕ್ಕಮಗಳೂರಿನಿಂದ ಕ್ಯಾನ್ಸರ್ ಪೀಡಿತರು ಮಂಗಳೂರಿನ ಆ್ಯಂಕಾಲಜಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರು. ಈಗ ಇಲ್ಲಿ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ನಗರದ ಸಾಮಾಜಿಕ ಕಾರ್ಯಕರ್ತ ಅ.ನಾ.ವಿಜಯೇಂದ್ರ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೇವಾ ಮನೋಭಾವ ಹೊಂದಿರುವ ಡಾ.ಸುರೇಶ್ ರಾವ್ ರವರ ಕುಟುಂಬದವರು ಸಾಮಾಜಿಕ ಕಳಕಳಿಯನ್ನು ಹೊಂದಿದವರು ಈಗಾಗಲೇ ಈ ಕ್ಷೇತ್ರದಲ್ಲಿ ಹೆಚ್ವು ಸೇವೆ ಸಲ್ಲಿಸಿ ಈ ಭಾಗದ ಜನರ ಉಪಯೋಗಕ್ಕೆ ತೀರ್ಥಹಳ್ಳಿಯನ್ನು ಕೇಂದ್ರವನ್ನಾಗಿಸಿ ಸುಮಾರು ಏಳೆಂಟು ಜಿಲ್ಲೆಗೆ ಒಂದು ಉತ್ತಮ ಕ್ಯಾನ್ಸರ್ ಅಸ್ಪತ್ರೆ ಪ್ರಾರಂಭಿಸುತ್ತಿರುವ ಇವರ ಕಾರ್ಯ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಡಿ. ಸುರೇಶ್ ರಾವ್ ರವರು ಮಾತನಾಡುತ್ತ ನುರಿತ ವೈದ್ಯಕೀಯ ತಂಡದವರೊAದಿಗೆ ಸುಮಾರು ೬೫ ಬೆಡ್ ನೊಂದಿಗೆ ಅಗಸ್ಟ್ ತಿಂಗಳಲ್ಲಿ ಈ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಟ್ಟಡದ ಬಹುತೇಕ ಕೆಲಸ ಮುಗಿದಿದ್ದು ಪೀಠೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ.  ಈಗಾಗಲೇ ಅವಶ್ಯತೆಯಿರುವ ಎಲ್ಲಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು. ಹೆಚ್ಚಿನದಾಗಿ ಸ್ಥಳೀಯ ಜನರಿಗೆ ಉದ್ಯೋಗ ನೀಡಲಾಗಿದ್ದು,  ಅವರಿಗೆಲ್ಲ ಈಗಾಗಲೇ ತರಬೇತಿ ನಿಡುವ ಕಾರ್ಯ ಆರಂಭವಾಗಿದೆ. ನಮ್ಮ ಮುಖ್ಯ ಉದ್ಧೇಶ ಸೇವಾ ಮನೋಭಾವನೆಯ ಗುರಿಯಾಗಿದ್ದು ತರಬೇತಿ ಕಾರ್ಯಕ್ರಮದಲ್ಲಿ ಸೇವಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ ಅನುಭವಿ ತಜ್ಞರನ್ನು ಕರೆಸಿ ಅವರಿಂದ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿಸುವ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.  ಗುಣಮಟ್ಟದ ಚಿಕಿತ್ಸೆಗೆ ಬೇಕಾದ ಎಲ್ಲಾ ಏರ್ಪಾಟು ಮಾಡಿಕೊಳ್ಳಲಾಗಿದೆ ಎಂದು ಈ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಅಸ್ಪತ್ರೆಯ ಸುತ್ತಲೂ ಇರುವ ಪರಿಸರವೂ ತುಂಬಾ ಚೆನ್ನಾಗಿದ್ದು ಅಕ್ಕ ಪಕ್ಕ ಗಿಡ ಮರಗಳಿಂದ ಕೂಡಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಸ್ಪತ್ರೆಯ  ಸಾರ್ವಜನಿಕ ಸಂಪರ್ಕ ಅಧಿಕಾರಿ ದುರ್ಗಾದಾಸ್ ಅಡಪ ಉಪಸ್ಥಿತರಿದ್ದರು.