ವಾಡಿಯಲ್ಲಿ ವಿಶ್ವ ಯೋಗ ದಿನಾಚರಣೆ
ವಾಡಿ,ಜೂ.23-ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡದ ಉದ್ಯಾನವನ ವನದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪಟ್ಟಣದ ಜನರು ಯೋಗಾಭ್ಯಾಸ ಮಾಡುವುದರ ಮೂಲಕ ಆಚರಿಸಿದರು.
ಹಿರಿಯರಾದ ಜಯದೇವ ಜೋಗಿಕಲಮಠ, ವಿಕೆ ಕೆದ್ಲಯ್ಯಾ ಅವರು ಸಸಿಗೆ ನೀರು ಊಣಿಸುವ ಮೂಲಕ ಯೋಗ ದಿನಾಚರಣೆಗೆ ಚಾಲನೆಯನ್ನು ನೀಡಿದರು.
ಈ ವೇಳೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಯೋಗಾಭ್ಯಾಸ ಮಾಡಿಸುತ್ತಾ ಮಾತನಾಡಿ, ಸುಮಾರು 5000 ವರ್ಷಗಳ ಹಿಂದೆ ಭಾರತದಲ್ಲಿ ಯೋಗ ಪದ್ಧತಿ ರೂಢಿಯಲ್ಲಿತ್ತು ಎನ್ನಲಾಗುತ್ತದೆ.ಯೋಗವನ್ನು ಇಂದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಅಭ್ಯಾಸ ಮಾಡುತ್ತಾ ಸಂಶೋಧನೆಯಲ್ಲಿ ತೊಡಗುತ್ತಿದ್ದಾರೆ. ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಪ್ರತಿವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ನಾವು ಆಚರಿಸುತ್ತಿದ್ದೇವೆ. ಯೋಗ ನಮ್ಮ ವೈಯಕ್ತಿಕ ಬೆಳವಣಿಗೆಗೆ ಮತ್ತು ಸಾಮಾಜಿಕ ಸುಧಾರಣೆಗೆ ಒಂದು ಉತ್ತಮ ಸಾಧನವಾಗಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಯೋಗದ ಪ್ರಮುಖ ಪಾತ್ರವನ್ನು ವಹಿಸುವುದನ್ನು ನಾವು ಕಾಣುತ್ತೇವೆ, ಇದು ಸಾಂಸ್ಕøತಿಕ ಮತ್ತು ಭೌಗೋಳಿಕ ಅಡೆತಡೆಗಳನ್ನು ಮೀರಿ ಏಕತೆ ಮತ್ತು ಸಾಮೂಹಿಕತೆಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಇದನ್ನು ನಿರಂತರವಾಗಿ ನಮ್ಮ ಕುಟುಂಬದವರೊಂದಿಗೆ ಯೋಗಕ್ಕಾಗಿ ಸಮಯ ಮೀಸಲಿಟ್ಟಾಗ ಮಾತ್ರ ಆರೋಗ್ಯವಂತ ಕುಟುಂಬ, ಆರೋಗ್ಯವಂತ ಸಮಾಜ, ಆರೋಗ್ಯವಂತ ದೇಶ ಆಗಲಿಕ್ಕೆ ಸಾಧ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಭೀಮರಾವ ದೊರೆ, ಅರ್ಜುನ ಕಾಳೆಕರ, ಶರಣಗೌಡ ಚಾಮನೂರ, ಮಲ್ಲಯ್ಯ ಸ್ವಾಮಿ ಮಠಪತಿ,ಕಾಶಿನಾಥ ಶೆಟಗಾರ,ಅಂಬದಾಸ ಜಾಧವ, ರವಿ ನಾಯಕ,ಗುಂಡುಗೌಡ ಚಾಮನೂರ,ರಮಕಾಂತ ನಾಯಕ,ರಮಣಸಿಂಗ ಚವ್ಹಾಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.