ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಯೋಗ ದಿನ ಆಚರಣೆ
ವಿಜಯಪುರ,ಜೂ.22:ಭಾರತ ಸರ್ಕಾರ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ವಿದ್ಯಾವರ್ಧಕ ಸಂಘದ ಬನ್ಸಿಲಾಲ್ ವಿಠಲದಾಸ್ ಪದವಿ ಮಹಾವಿದ್ಯಾಲಯ, ನೆಹರು ಯುವ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಶುಕ್ರವಾರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಯೋಗ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೃಷ್ಣಮೂರ್ತಿ ದೇಶಪಾಂಡೆ ಅವರು ಉದ್ಘಾಟಿಸಿ ಮಾತನಾಡಿ, ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಶಾಂತಿ ಸಹ ಬಾಳ್ವೆ ಬದುಕು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಪೆÇೀಷಕರು ಶಿಕ್ಷಣದ ಜೊತೆಗೆ ಯೋಗ ಶಿಕ್ಷಣ ನೀಡಲು ಮಕ್ಕಳಿಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ ದರ್ಬಾರ ಅವರು ಮಾತನಾಡಿ, ಸುಮಾರು 5000 ವರ್ಷಗಳ ಇತಿಹಾಸವಿರುವ ಯೋಗ ಕಲೆಯನ್ನು ಜಗತ್ತಿಗೆ ಪರಿಚಯಿಸಿದ ಹಿರಿಮೆ ಭಾರತ ಹೊಂದಿದೆ. ಪ್ರತಿಯೊಬ್ಬ ಭಾರತೀಯ ಹೆಮ್ಮೆಯ ಪ್ರತೀಕವಾದ ಯೋಗ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸಂವಹನ ಇಲಾಖೆಯ ಸಿ.ಕೆ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಮನುಷ್ಯ ಸದೃಢನಾಗುತ್ತಾನೆ ಎಂದರು.
ಯೋಗ ಗುರು ಮಾತೆ ಕಲಾವತಿ ಅಪರಾಜ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಯೋಗಾಭ್ಯಾಸದ ಕುರಿತು ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಚಿತ್ರಕಲೆ, ರಂಗೋಲಿ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ದಿಲೀಪ ದರ್ಬಾರ್, ದೈಹಿಕ ನಿರ್ದೇಶಕಿ ಕಲಾವತಿ ಅಪರಾಜ, ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರಕಾಶ ರಾಠೋಡ, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೋಂಗ್ರೆ, ದರ್ಬಾರ್ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಗಿರೀಶ ಮಣ್ಣೂರ, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ ಅಧಿಕಾರಿ ರಾಜು ಕಪಾಳಿ, ದರ್ಬಾರ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಸೀಮಾ ಪಾಟೀಲ, ಉಪನ್ಯಾಸಕ ಜಗದೀಶ , ಸುನಿತಾ, ಕಾಶೀನಾಥ, ಪ್ರಾಥಮಿಕ ಶಾಲೆಯ ಮುಖ್ಯಸ್ಥ ರಮೇಶ ಕೋಟ್ಯಾಳ ಮತ್ತಿತರು ಉಪಸ್ಥಿತಿದ್ದರು.
ರಾಜು ಕಪಾಳಿ ಸ್ವಾಗತಿಸಿದರು, ಜಗದೀಶ ಸಾತ್ಯಾಳ ನಿರೂಪಿಸಿ, ವಂದಿಸಿದರು.