ಮಾನವನ ದುರಾಸೆಯಿಂದಲೇ ಪರಿಸರ ಮಾಲಿನ್ಯ: ಡಾ. ಬಸವರಾಜ ಬಲ್ಲೂರ
ಬೀದರ್: ಜೂ.22:ಪ್ರಕೃತಿಗೆ ಮನುಷ್ಯನ ಎಲ್ಲ ಆಸೆ ಪೂರೈಸುವ ಶಕ್ತಿಯಿದೆ. ಆದರೆ, ಆಧುನಿಕ ಮನುಷ್ಯನ ದುರಾಸೆಯಿಂದಲೇ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ನುಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೀದರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ನೌಬಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ಪರಿಸರ ಮಾಲಿನ್ಯದಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ನೈಸರ್ಗಿಕ ಸಂಪತ್ತು ನಾಶವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭವಿಷ್ಯದ ಪೀಳಿಗೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಇದು ನಮ್ಮ ದೌರ್ಭಾಗ್ಯ. ಈ ದುಷ್ಟ ಪ್ರಕ್ರಿಯೆಯಿಂದ ಭೂಮಿಯ ಮೇಲಿನ ಎಲ್ಲ ಜೀವಿಗಳು ಬೆದರಿಕೆಗೆ ಒಳಗಾಗುತ್ತವೆ. ಕೈಗಾರಿಕಾ ಪ್ರಕ್ರಿಯೆಗಳು ಸೇರಿದಂತೆ ಎಲ್ಲ ರೀತಿಯ ಮಾನವ ಚಟುವಟಿಕೆಗಳಿಂದ ಬಿಡುಗಡೆಯಾದ ಮಾಲಿನ್ಯಕಾರಕಗಳು ಪ್ರಕೃತಿಯ ಸೂಕ್ಷ್ಮ ಸಮತೋಲನದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಿವೆ ಎಂದು ತಿಳಿಸಿದರು.
ಪರಿಸರ ಮಾಲಿನ್ಯದ ಸಾಮಾನ್ಯ ರೂಪಗಳೆಂದರೆ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಮಣ್ಣಿನ ಮಾಲಿನ್ಯ. ಪರಿಸರ ಮಾಲಿನ್ಯವು ಈಗ ಮಾನವೀಯತೆ ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿ ಗಮನಹರಿಸಬೇಕಾಗಿದೆ. ತಡವಾಗುವ ಮೊದಲು ಪರಿಹಾರಗಳನ್ನು ಕಾರ್ಯಗತಗೊಳಿಸಬೇಕಾಗಿದೆ ಎಂದು ಹೇಳಿದರು.
ಮಾಲಿನ್ಯವು ದಶಕಗಳಿಂದ ಪ್ರಪಂಚದ ಮೂಲೆ ಮೂಲೆಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾನಿಗೊಳಿಸುತ್ತಿದೆ. ಆದರೆ ಪರಿಸರದ ಮೇಲೆ ಅದರ ಪರಿಣಾಮವನ್ನು ತಗ್ಗಿಸಲು ಯಾವುದೇ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದೆ ನಾವು ಓಡಿಹೋಗುವಂತೆ ತೋರುತ್ತಿದೆ. ಪರಿಸರವನ್ನು ಸಂರಕ್ಷಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಾಳಜಿಯೊಂದಿಗೆ ನಿರ್ವಹಿಸುವಂತೆ ಶಿಬಿರಾರ್ಥಿಗಳಿಗೆ ಸಲಹೆ ಮಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ. ಸುಚಿತಾನಂದ ಕೆ. ಮಲ್ಕಾಪುರ ಅವರು, ಯುವಕರು ಶ್ರಮ ಸಂಸ್ಕøತಿ ಬೆಳೆಸಿಕೊಳ್ಳಬೇಕು. ಯಾವುದೇ ಅಪೇಕ್ಷೆ ಪಡದೆ ಸೇವಾ ಮನೋಭಾವ, ಸಹನೆ, ತ್ಯಾಗ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಹೇಶ್ವರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ನಿರ್ದೇಶಕ ಬಾಲಸುಬ್ರಹ್ಮಣ್ಯ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಚಾರ್ಯೆ ಡಾ.ಜೈಶ್ರೀ ಪ್ರಭಾ, ಡಾ. ಗಿರಿಜಾ ಮಂಗಲಗಟ್ಟಿ, ಡಾ.ರಾಜಕುಮಾರ ಅಲ್ಲೂರೆ, ಡಾ. ಸುನಿಲಕುಮಾರ್ ಮೂಲಗೆ ಡಾ. ಈಶ್ವರಯ್ಯ ಕೋಡಂಬಲ್ ಸಪ್ನಾ, ನಾಗಮ್ಮ ಬಂಗರಗಿ ಇದ್ದರು.