ಯೋಗದಿಂದ ದೇಹ, ಮನಸ್ಸು ಉತ್ತಮವಾಗಿರುತ್ತದೆ
ಸಂಜೆವಾಣಿ ನ್ಯೂಸ್
ಮೈಸೂರು.ಜೂ.22:- ಪ್ರತಿನಿತ್ಯ ಯೋಗ, ಧ್ಯಾನ ಮಾಡಿದರೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಅವಧೂತ ದತ್ತಪೀಠದ ನಾದ ಮಂಟಪದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಯಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಶ್ರೀಗಳು ಯೋಗಾಸನ ಮಾಡಿ ಮಾದರಿಯಾದರು. ಮಕ್ಕಳ ಮಧ್ಯೆ ಕುಳಿತ ಶ್ರೀಗಳು ಹಲವು ಆಸನಗಳನ್ನು ಹೇಳಿಕೊಟ್ಟು ಮಕ್ಕಳನ್ನು ಪೆÇ್ರೀತ್ಸಾಹಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಪ್ರತಿನಿತ್ಯ ಯೋಗ ಮಾಡಿ, ಕನಿಷ್ಠ 40 ನಿಮಿಷ ಧ್ಯಾನ ಮಾಡಿ ಅದರಿಂದ ಆಗುವ ಅನುಭವ ಅದ್ಭುತ. ಅಂತಹ ಸಮಯವನ್ನು ಮಿಸ್ ಮಾಡದೆ ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
40 ನಿಮಿಷ ಕಣ್ಣು ಮುಚ್ಚಿ ಉಸಿರನ್ನು ಒಂದೇ ತರ ಸಮತುಷ್ಟಿಯಲ್ಲಿ ತೆಗೆದುಕೊಳ್ಳಬೇಕು, ಮುಖದಲ್ಲಿ ನಗು ಇರಬೇಕು, ಕೋಪ, ಹಸಿವು ತೋರಬಾರದು. ಬೇರೆ ಯಾವುದೇ ಯೋಚನೆ ಮಾಡಬಾರದು ಯಾವ ಕೆಟ್ಟ ಶಬ್ದವನ್ನಾಗಲಿ ಅಥವಾ ಹಾಡು, ಮಾತುಗಳನ್ನು ಆಲಿಸದೆ ತದೇಕಚಿತ್ತರಾಗಿ ಧ್ಯಾನ ಮಾಡಬೇಕು ಎಂದು ಹೇಳಿದರು.
ಯೋಗ ಮಾಡುವುದರಿಂದ ದೇಹ ಸದೃಢವಾಗುತ್ತದೆ, ಮನಸು ತಿಳಿಯಾಗಿರುತ್ತದೆ. ದೇಹ ರಬ್ಬರ್ ನಂತೆ ಹೇಗೆ ಬೇಕಾದರೂ ಬೆಂಡ್ ಮಾಡಬಹುದು ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಎಂದು ತಿಳಿಸಿದರು.
ಯೋಗ ಧ್ಯಾನದ ಜತೆಗೆ ಹಠಯೋಗ ಕೂಡ ಮಾಡಬೇಕು ನಮ್ಮ ಆಶ್ರಮದ ಮಕ್ಕಳು ಹೀಗೆ ಹಠಯೋಗ ಮಾಡಿ ಸದೃಢರಾಗಿದ್ದಾರೆ ಹೇಗೆ ಬೇಕಾದರೂ ದೇಹ ಬೆಂಡ್ ಮಾಡುತ್ತಾರೆ ಎಂದು ಮಕ್ಕಳ ಕಾರ್ಯ ಶ್ಲಾಘಿಸಿದರು.
ಇಂದಿನ ಯೋಗ ದಿನಾಚರಣೆಯಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಿಶೇಷ ಮಕ್ಕಳು ಪಾಲ್ಗೊಂಡು ಯೋಗಭ್ಯಾಸ ಮಾಡಿದ್ದು ವಿಶೇಷವಾಗಿತ್ತು.
ಅವಧೂತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.