ಮಂಗಳೂರಿನ ಜೆಬಿಎಫ್-ಜಿಎಂಪಿಎಲ್ ಸಮಸ್ಯೆಯನ್ನು ೪೦ ದಿನದಲ್ಲಿ ಬಗೆಹರಿಸಿದ ಮೋದಿ ಸರ್ಕಾರ
ಮಂಗಳೂರು: ಮಂಗಳೂರಿನ ವಿಶೇಷ ಆರ್ಥಿಕ ವಲಯ(ಎಂಎಸ್‌ಇಝೆಡ್)ದಲ್ಲಿ ಜೆಬಿಎಫ್ ಕಂಪೆನಿ ಸ್ಥಾಪನೆಗೆ ಜಮೀನು ಕೊಟ್ಟಿದ್ದ ಪಿಡಿಎಫ್ ಉದ್ಯೋಗಸ್ಥರನ್ನು ಜಿಎಂಪಿಎಲ್(ಗೈಲ್) ಕಂಪೆನಿಯಲ್ಲಿ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಿ ಬಹುದಿನಗಳ ಗಂಭೀರ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಕಾರಣರಾದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸತತ ಪ್ರಯತ್ನವನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಶ್ಲಾಘಿಸಿದ್ದಾರೆ.
ಜೆಬಿಎಫ್-ಜಿಎಂಪಿಎಲ್(ಗೈಲ್) ಸಮಸ್ಯೆಯನ್ನು ಕೇಂದ್ರ ಸರ್ಕಾರವು ಕೇವಲ ೪೦ ದಿನಗಳಲ್ಲಿ ಬಗೆಹರಿಸಿ ಕೊಟ್ಟಿರುವ ಹಿನ್ನಲೆಯಲ್ಲಿ ಕ್ಯಾ. ಚೌಟ ಅವರು ಮಂಗಳೂರಿನ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಪರವಾಗಿ ಇಂದು  ನವದಿಲ್ಲಿಯಲ್ಲಿ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾದ ತಕ್ಷಣದಲ್ಲೇ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದ ಸುಮಾರು ೧೧೫ ಪಿಡಿಎಫ್ ಕುಟುಂಬಸ್ಥರ ಬಹುದಿನಗಳಿಂದ ಈಡೇರದೆ ಬಾಕಿಯಾಗಿದ್ದ ಈ ಪ್ರಮುಖ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪೆಟ್ರೋಲಿಯಂ ಸಚಿವಾಲಯ ಹಾಗೂ ಜಿಎಂಪಿಎಲ್ ಕಂಪೆನಿ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಪ್ರೇರೇಪಿಸಿ ಈ ಗಂಭೀರ ಸಮಸ್ಯೆ ಬಗೆಹರಿಸುವುದಕ್ಕೆ ವಹಿಸಿದ್ದ ಮುತುರ್ವಜಿಗೆ ಸಚಿವ ಹರ್‌ದೀಪ್ ಸಿಂಗ್ ಅವರು ಇದೇವೇಳೆ ಕ್ಯಾ. ಚೌಟ ಅವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಖುದ್ದು ಸಚಿವ ಹರ್‌ದೀಪ್ ಸಿಂಗ್ ಪುರಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, “ಮಂಗಳೂರಿನ ಎಂಎಸ್‌ಇಝೆಡ್‌ನಲ್ಲಿ ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್(ಜಿಎಂಪಿಎಲ್), ಜೆಬಿಎಫ್‌ನ್ನು ಸ್ವಾಧೀನಪಡಿಸಿದ ಬಳಿಕ ೧೧೫ ಜೆಬಿಎಫ್ ಪಿಡಿಎಫ್ ಕುಟುಂಬಸ್ಥರ ಉದ್ಯೋಗ ಮುಂದುವರಿಸುವುದಕ್ಕೆ ಸಮಸ್ಯೆಯಾಗಿತ್ತು. ಈ ಗಂಭೀರ ಸಮಸ್ಯೆ ಬಗ್ಗೆ ಕ್ಯಾ. ಚೌಟ ಅವರು ನನ್ನ ಬಳಿ ನಿರಂತರ ಫಾಲೋಅಪ್ ಮಾಡಿ ಬಹಳ ವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿದ್ದ ಈ ಪಿಡಿಎಫ್ ಕುಟುಂಬಸ್ಥರ ಸಂಕಷ್ಟವನ್ನು ಆದ್ಯತೆ ಮೇರೆಗೆ ಬಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೩.೦ ಸರ್ಕಾರದಲ್ಲಿ ಕೇವಲ ೪೦ ದಿನದಲ್ಲಿ ಜೆಬಿಎಫ್ ಉದ್ಯೋಗಸ್ಥರ ಈ ಜ್ವಲಂತ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರುವುದು ನನಗೆ ಬಹಳ ಸಂತಸ ತಂದಿದೆ. ಈ ವಿಚಾರದಲ್ಲಿ ನಾನು ಕ್ಯಾ. ಚೌಟ ಅವರ ಬದ್ಧತೆ ಮತ್ತು ಪ್ರಯತ್ನವನ್ನು ಪ್ರಶಂಸಿಸುವುದಾಗಿ” ಸಚಿವ ಹರ್‌ದೀಪ್ ಸಿಂಗ್ ಪುರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.