ಕೋಲಾರದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಸಭೆಗೆ ಚಾಲನೆ
ಕೋಲಾರ,ಜೂ,೨೦- ಭಾರತ ಸೇವಾದಳವತಿಯಿಂದ ಪ್ರತಿ ಶಾಲೆಯಲ್ಲಿ ಶಾಖೆಗಳನ್ನು ತೆರೆದು ಪ್ರತಿ ವಿದ್ಯಾರ್ಥಿಗೂ ಸೇವಾದಳ ತತ್ವಗಳನ್ನು ಪರಿಚಯಿಸಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಭಾರತ ಸೇವಾದಳ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಚುನಾವಣೆ ಮತ್ತಿತರ ಕಾರಣಗಳಿಂದಾಗಿ ಸೇವಾದಳ ಚಟುವಟಿಕೆಗಳನ್ನು ನಿರೀಕ್ಷೆಗೆ ತಕ್ಕಂತೆ ಮಾಡಲಾಗಲಿಲ್ಲ, ಈ ಶೈಕ್ಷಣಿಕ ವರ್ಷದಲ್ಲಿ ಕೋಲಾರ ಜಿಲ್ಲೆಯು ಮಾದರಿಯಾಗುವಂತೆ ಸೇವಾದಳ ಚಟುವಟಿಕೆಗಳನ್ನು ಶಿಕ್ಷಕರ ಮಿಲಾಪ್ ಶಿಬಿರ, ಪುನಶ್ಚೇತನ ಕಾರ್ಯಾಗಾರ, ಮಕ್ಕಳ ನಾಯಕತ್ವ ಶಿಬಿರ, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜ ಕಾರ್ಯಾಗಾರಗಳ ಮೂಲಕ ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಸಮಿತಿಗಳ ಸಹಕಾರದೊಂದಿಗೆ ನಡೆಸಬೇಕಾಗಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಗುಣಾತ್ಮಕವಾಗಿ ಸೇವಾದಳ ಚಟುವಟಿಕೆಗಳನ್ನು ನಡೆಸಿ ಸೇವಾದಳಕ್ಕೆ ದೊಡ್ಡ ಮಟ್ಟದಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸಮೂಹವನ್ನು ಆಕರ್ಷಿಸೋಣ ಎಂದು ಅವರು ಸಲಹೆ ನೀಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸೇವಾದಳ ಕೇಂದ್ರ ಸಮಿತಿಯಿಂದ ಕಳುಹಿಸಿರುವ ಕಾರ್ಯಕ್ರಮಗಳ ಪಟ್ಟಿಯನ್ನು ಚಾಚು ತಪ್ಪದೆ ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಪ್ರತಿ ತಿಂಗಳು ಸಭೆಗಳನ್ನು ಕರೆದು, ಕಾರ್ಯೋನ್ಮುಖರಾಗೋಣ ಎಂದರು.
ಭಾರತ ಸೇವಾದಳ ಕೇಂದ್ರ ಸಮಿತಿಯು ಕೋಲಾರ ಜಿಲ್ಲಾ ಸಮಿತಿ ಮೇಲೆ ವಿಶ್ವಾಸವಿಟ್ಟು ಮಕ್ಕಳ ನಾಯಕತ್ವ ಶಿಬಿರ ಹಾಗೂ ಶಿಕ್ಷಕರ ತರಬೇತಿ ಶಿಬಿರ ನಡೆಸಲು ಸೂಚಿಸಿದ್ದು, ಇದಕ್ಕೂ ಮೊದಲು ಎಲ್ಲಾ ತಾಲೂಕುಗಳಲ್ಲಿ ಶಿಕ್ಷಕರ ಮಿಲಾಫ್ ಶಿಬಿರಗಳನ್ನು ಆಯೋಜಿಸಿ ಸೇವಾದಳ ಚಟುವಟಿಕೆಗಳಿಗೆ ಚಾಲನೆ ನೀಡೋಣ ಎಂದರು.
ಜಿಲ್ಲಾ ಸಮಿತಿ ಸಭೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ, ಕೇಂದ್ರ ಸಮಿತಿ ಕಾರ್ಯಕ್ರಮಗಳು, ವಿವಿಧ ಮಹನೀಯರ ಜಯಂತಿ, ಪುಣ್ಯಸ್ಮರಣೆ, ವಿಶೇಷ ದಿನಾಚರಣೆಗಳನ್ನು ನಡೆಸುವ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಮಟ್ಟದಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸೇವಾದಳ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲು ಸಭೆಯು ತೀರ್ಮಾನಿಸಿತು.
ಸಭೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಸ್.ಸುಧಾಕರ್, ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್, ಕೋಶಾಧ್ಯಕ್ಷ ಎಂ.ನಾಗರಾಜ್, ಸಂಘಟನಾ ಕಾರ್ಯದರ್ಶಿ ಆರ್.ರವಿಕುಮಾರ್, ಜಿಲ್ಲಾ ಸಂಚಾಲಕ ಬಹಾದ್ದೂರ್ ಸಾಬ್, ಕೋಲಾರ ತಾಲೂಕು ಅಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಫಲ್ಗುಣ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ಕಾರ್ಯದರ್ಶಿ ಅಶೋಕ್, ಪದಾಕಾರಿಗಳಾದ ಚಾಂದ್‌ಪಾಷಾ, ಚಲಪತಿ, ಯಲ್ಲಪ್ಪ, ಸುರೇಶ್, ಮಂಜುನಾಥ್, ಅಶೋಕ್ ಇತರರು ಹಾಜರಿದ್ದರು.
ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಸಭೆಯು ರಾಷ್ಟ್ರಗೀತೆಗಾಯನದೊಂದಿಗೆ ಮುಕ್ತಾಯವಾಯಿತು.