ಡಾ. ಎಸ್ ಎಸ್ ಎನ್ ಪಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಆಚರಣೆಯ ಸಂಭ್ರಮ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.17; ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಶಾಮನೂರು ಶಿವಶಂಕರಪ್ಪನವರ 94ನೇ ಹುಟ್ಟುಹಬ್ಬದ ಪ್ರಯುಕ್ತ ಡಾ ಎಸ್ ಎಸ್ ಎನ್ ಪಿ ಶಾಲೆಯಲ್ಲಿ ಫೌಂಡರ್ಸ್ ಡೇ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಡೀನ್ ಮಂಜುನಾಥ ರಂಗರಾಜು ಅಲಂಕರಿಸಿದ್ದರು. ವಿಶೇಷವಾಗಿ ಡಾ.ಶಾಮನೂರು ಶಿವಶಂಕರಪ್ಪ ಅವರಂತೆಯೇ ಹೋಲುವ ವೇಷಭೂಷಣವನ್ನು ಶಿಕ್ಷಕರಾದ  ರವೀಂದ್ರ ಅರಳುಗುಪ್ಪಿ ಅವರು ಧರಿಸಿ ಎಲ್ಲರ ಗಮನ ಸೆಳೆದು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಪ್ರಾಂಶುಪಾಲರಾದ ಶ್ರೀಮತಿ ಕಮಲ್ ಬಿ ನಾರಾಯಣ ಅವರು ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದರು.ಈ ಸಂಸ್ಥಾಪಕರ ದಿನದ ಅಂಗವಾಗಿ ಶಾಲೆಯಲ್ಲಿ ಡಾ.ಶಾಮನೂರು ಶಿವಶಂಕರಪ್ಪನವರಂತೆಯೇ ಹೋಲಿಕೆಯ ವೇಷಭೂಷಣದಾರಿಯ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಯಿತು. ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಕೊಡುತ್ತಾ ಸಭೀಕರೆಲ್ಲರೂ ಆಶ್ಚರ್ಯಚಕಿತವಾಗುವಂತೆ ಮಾಡಿದರು. ಅವರ ಸಮ್ಮುಖದಲ್ಲಿಯೇ ಶಾಲಾ ಮಕ್ಕಳಿಂದ ಸಭಾ ಚಟುವಟಿಕೆಗಳು ಜರುಗಿದವು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡೀನ್ ಮಂಜುನಾಥ ರಂಗರಾಜು ಅವರು ಡಾ.ಶಾಮನೂರು ಶಿವಶಂಕರಪ್ಪನವರಂತೆಯೇ ಹೋಲಿಕೆಯ ವೇಷಭೂಷಣದಾರಿಯನ್ನು ಕಂಡು ಹರ್ಷಗೊಂಡು ನಮಸ್ಕರಿಸಿ ಅಪ್ಪಾಜಿ ಬಗ್ಗೆ ಮಾತಾನಾಡುತ್ತಾ, ಇಂದು ದಾವಣಗೆರೆ ಇಷ್ಟೊಂದು ಅಭಿವೃದ್ಧಿ ಕಾಣಬೇಕಾದರೆ ಇವರ ಕೊಡುಗೆಯು ಅಪಾರವಾಗಿದೆ. ಇವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ, ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅಪಾರವಾದ ಅಭಿವೃದ್ಧಿಯನ್ನು ಮಾಡಿದ್ದರಿಂದ ಇಂದು ದಾವಣಗೆರೆಯ ಅತ್ಯುನ್ನತ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಡೀನ್  ಮಂಜುನಾಥ ರಂಗರಾಜು, ಡಾ. ಎಸ್ ಎಸ್ ಎನ್ ಪಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಮಲ್ ಬಿ ನಾರಾಯಣ, ಉಪಪ್ರಾಂಶುಪಾಲರಾದ  ರಮೇಶ್ ಬಾಬು, ಶಾಲಾ ಸಂಯೋಜಕರಾದ ಶ್ರೀಮತಿ ರುತಿಕಾ ಮತ್ತು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.