ಮನುಷ್ಯ ಆರೋಗ್ಯವಾಗಿರಲು ಶುದ್ದ ರಕ್ತ ಬೇಕಿದೆ……

ಪ್ರತಿ ವರ್ಷ ವಿಶ್ವದಾದ್ಯಂತ ‘ವಿಶ್ವ ರಕ್ತದಾನಿಗಳ ದಿನ’ ವನ್ನು ಆಚರಣೆ ಮಾಡಲಾಗುತ್ತದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯವಾಗಿರಲು ಶುದ್ದ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಜಗತ್ತಿನೆಲ್ಲಡೆ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಜನರಿಗೆ ರಕ್ತದ ಅವಶ್ಯವಿರುತ್ತದೆ. ಅನೇಕರು ಸರಿಯಾದ ಸಮಯಕ್ಕೆ ರಕ್ತ ಸಿಗದೆ ಸಾವನ್ನಪ್ಪುವುದು ಉಂಟು. ಅದಕ್ಕಾಗಿಯೇ ರಕ್ತವನ್ನು ಜೀವದ್ರವ್ಯ ಎನ್ನಲಾಗುತ್ತದೆ.ದಾನಗಳಲ್ಲಿ ರಕ್ತದಾನವನ್ನು ಸಹ ಬಹಳ ಶ್ರೇಷ್ಠ ದಾನವೆಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ *ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನ* ವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್‌ನೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ.ಇಂಟರ್ನ್ಯಾಷನಲ್‌ ಫೆಡರೇಶನ್ ಆಫ್‌ ರೆಡ್‌ ಕ್ರಾಸ್‌ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿ, ಇಂಟರ್ನ್ಯಾಷನಲ್‌ ಫೆಡರೇಶನ್ ಆಫ್‌ ಬ್ಲಡ್‌ ಡೋನರ್ ಆರ್ಗನೈಸೇಶನ್‌ ಮತ್ತು ಇಂಟರ್ನ್ಯಾಷನಲ್‌ ಸೊಸೈಟಿ ಆಫ್‌ ಬ್ಲಡ್ ಟ್ರಾನ್ಸ್‌ಫ್ಯೂಷನ್‌* ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಸ್ಮರಿಸುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ಇದಲ್ಲದೆ, *ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೇನರ್‌* ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್‌ಗಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಅಕ್ಟೋಬರ್‌ 1 ಅನ್ನು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.ಪ್ರತಿ ವರ್ಷ ರಕ್ತ ದಾನಿಗಳ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ರಕ್ತ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದು ವಿಶ್ವ ರಕ್ತದಾನಿಗಳ ಉದ್ದೇಶವಾಗಿದೆ. ಇದರ ಜೊತೆ ಅಗತ್ಯವಿರುವ ರೋಗಿಗಳಿಗೆ ರಕ್ತ ಲಭಿಸುವಂತೆ ನೋಡಿಕೊಳ್ಳುವುದಾಗಿದೆ. ರಕ್ತ ದಾನಿಗಳಿಂದ ಪ್ರತಿ ವರ್ಷ ಕೋಟ್ಯಾಂತರ ಜನರು ತಮ್ಮ ಜೀವವನ್ನ ಉಳಿಸಿಕೊಂಡಿದ್ದಾರೆ.ಕ್ಯಾನ್ಸರ್, ಹೃದಯಸಂಬಂಧಿ ಸಮಸ್ಯೆಗಳು, ಅಪಘಾತ, ಹೆರಿಗೆ ಸಂಬಂಧಿ ಚಿಕಿತ್ಸೆ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ*. ಆದರೆ ಭಾರತವೂ ಸೇರಿದಂತೆ ಇಡೀ ಪ್ರಪಂಚದಲ್ಲಿ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬದುಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜನರು ರಕ್ತದ ಕೊರತೆಯಿಂದಾಗಿ ಮೃತಪಡುತ್ತಿದ್ದಾರೆ. ಈ ಹಿನ್ನಲೆಯಲ್ಲೆ ವಿಶ್ವದ ಎಲ್ಲಾ ರಾಷ್ಟ್ರಗಳ ಸರ್ಕಾರಗಳು, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿವೆ.ದಾನಿಗಳು ಒಮ್ಮೆ ರಕ್ತ ದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು. *ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು. ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿಯಾಗಲಿದೆ.18 ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ದಾನಿಗಳ ದೇಹದ ತೂಕ 45 ಕೆ.ಜಿ. ಮೇಲ್ಪಟ್ಟಿದ್ದು, ಹಿಮೋಗ್ಲೋಬಿನ್‌ ಅಂಶ 12.5 ಗ್ರಾಮ್‌ಗಿಂತ ಹೆಚ್ಚಿರಬೇಕು. ರಕ್ತದ ಒತ್ತಡ ಸಾಮಾನ್ಯವಾಗಿರಬೇಕು. ಅಂದರೆ ಸಿಸ್ಟೋಲಿಕ್‌ ರಕ್ತದ ಒತ್ತಡ 100 ರಿಂದ 140 ಹಾಗೂ ಡಯಾಸ್ಟೊಲಿಕ್‌ ಒತ್ತಡ 70 ರಿಂದ 100 ಇರಬೇಕು.ರಕ್ತದಾನ ಮಾಡುವ ಮೂಲಕ ರಕ್ತದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಜೀವಗಳ ಉಳಿವಿಕೆಗೆ ಕಾರಣರಾಗಲೂ ಪ್ರಯತ್ನಿಸೋಣ….ರಕ್ತದಾನ ಮಾಡಿ ಜೀವ ಉಳಿಸಿ
– ಶಿವಕುಮಾರ ಎನ್ ಜಿ
ದಾವಣಗೆರೆ