ಬಸವ ಮಂಟಪದಲ್ಲಿ ಚನ್ನಬಸವಾನಂದ ಶ್ರೀಗಳು ಹಾಗೂ ಇತರರಿಗೆ ಅಭಿನಂದನೆ
ಬೀದರ್: ಜೂ.17:ಇಡೀ ವಿಶ್ವಕ್ಕೆ ಮೊಟ್ಟಮೊದಲು ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದು ಭಾರತ ದೇಶ ಎಂಬ ವಿಷಯ ಜಗತ್ತಿಗೆ ಸಾರುವ ಅವಶ್ಯಕತೆ ಇದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ತಿಳಿಸಿದರು.
ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ನಗರದ ಬಸವ ಮಂಟಪದಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭ ಹಾಗೂ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಸಮಾವೇಶದಲ್ಲಿ ವಚನಗಳ ಆಧಾರಿತ ಸ್ಮರಣಿಕೆಯನ್ನು ಅಲ್ಲಿನ ಜನತೆಗೆ ನೀಡಿದಾಗ ನಮಗೆ ಏನು ಬೇಕಾಗಿತ್ತು ಅದನ್ನು ಇಂದು ನೀವು ನೀಡಿದ್ದೀರಿ ಎಂದು ಹೆಮ್ಮೆ ಪಟ್ಟಿದ್ದರು ಎಂದು ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಸ್ಮರಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ದಕ್ಷಿಣ ಆಫ್ರಿಕಾದ ಜನತೆ ಮುಗ್ಧರು ಹೃದಯವಂತರು. ಕರಿಯರ ಮತ್ತು ಬಿಳಿಯರ ಮಧ್ಯೆ ಭೇದಭಾವ ಹೋಗಲಾಡಿಸಲು ಮಹಾತ್ಮ ಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಹೋರಾಟ ಮಾಡಿದ ಮತ್ತು ಸತ್ಯಾಗ್ರಹ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ಸಮಾವೇಶ ಮಾಡಿದ್ದು ಖುಷಿ ಎನಿಸಿದೆ. ಗಾಂಧಿ ಟಾಲಸ್ಟಾಯ್, ಪೀಠರ ಮಾರಿಜ್ ಬರ್ಗ್ ಸೇರಿದಂತೆ ಹತ್ತಾರು ಸ್ಥಳಗಳಲ್ಲಿ ಬಸವ ತತ್ವ ಪ್ರಚಾರ ಕೈಗೊಳ್ಳಲಾಗಿದೆ. 2025 ರಲ್ಲಿ ಇಂಗ್ಲೆಂಡಿನ ಲಂಡನ್ ನಲ್ಲಿ ಬಸವ ತತ್ವ ಸಮಾವೇಶ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಸವ ತತ್ವ ಪ್ರಚಾರಗೈದು ತವರು ಭಾರತಕ್ಕೆ ಯಶಸ್ವಿಯಾಗಿ ಮರಳಿದ ಪೂಜ್ಯ ಶ್ರೀ ಡಾ. ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಪಾಟೀಲ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಸೋಮಶೇಖರ ಮಹಾಗಾಂವ ಅವರಿಗೆ ಸನ್ಮಾನಿಸಲಾಯಿತು. ಬಸವ ಮಂಟಪದ ವಿದ್ಯಾರ್ಥಿನಿ ಕು. ಕುಸುಮಾ ಪಿಯುಸಿಯಲ್ಲಿ 81% ಪ್ರತಿಶತ ಅಂಕ ತೆಗೆದ ಕಾರಣ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಇದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವಂತರಾವ ಬಿರಾದಾರ, ಮನ್ಮಥಯ್ಯ ಸ್ವಾಮಿ, ವಿಶ್ವನಾಥ ಉಪ್ಪೆ, ಶಾಂತಪ್ಪ ಮುಗಳಿ, ಗುರುನಾಥ ನಿಡಗುಂದಿ, ಶಿವಾಜಿ ಭೋಸ್ಲೆ, ಶ್ರೀನಾಥ ಕೋರೆ, ಸತೀಶ ಪಾಟೀಲ, ನಿರ್ಮಲಾ ನಿಲಂಗೆ ಸೇರಿದಂತೆ ಚಿಕ್ಕಪೇಟ ರಾಷ್ಟ್ರೀಯ ಬಸವ ದಳದ ಶರಣರು ಉಪಸ್ಥಿತರಿದ್ದರು.