ಅಂತರಾಷ್ಟ್ರೀಯ ಯೋಗ ದಿನಾಚರಣೆ: ಯೋಗೋತ್ಸವ ಕುರಿತು ಪೂರ್ವಭಾವಿ ತರಬೇತಿ ಕಾರ್ಯಾಗಾರ
ವಿಜಯಪುರ,ಜೂ.16 :10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ ವತಿಯಿಂದ ಯೋಗೋತ್ಸವ ಕಾರ್ಯಕ್ರಮ ಹಾಗೂ ಐಆರ್‍ಬಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ದೇಹದ ತೂಕ ನಿರ್ವಹಣೆ ಮತ್ತು ಆಹಾರ ಪದ್ಧತಿ ಕುರಿತು ತರಬೇತಿ ಕಾರ್ಯಾಗಾರವನ್ನು ಐಆರ್‍ಬಿಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಪ್ರಸನ್ನಕುಮಾರ ಅವರು ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲಿಸಿರುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಜಂಕ್‍ಫುಡ್ ಮತ್ತು ಕಲುಷಿತ ವಿಷಕಾರಿ ಆಹಾರದಿಂದ ಮಾನವನ ಮೇಲಾಗುವ ಪರಿಣಾಮಗಳು ಹಾಗೂ ಆಹಾರ ಪದ್ಧತಿ, ಶುದ್ಧ ಆಹಾರ ಸೇವನೆ, ದೈನಂದಿನ ಜೀವನ ಕ್ರಮದ ಬಗ್ಗೆ ಆಯುಷ್ ಇಲಾಖೆಯ ಡಾ. ವಿಜಯಮಹಾಂತೇಶ ದೇಸಾಯಿ ಮಾಹಿತಿ ನೀಡಿದರು.
ವಿವಿಧ ವಿಷಯಗಳ ಕುರಿತು ಡಾ. ಬಸವರಾಜ ವಗ್ಗರಗಿ, ಸುನೀತಾ ಬಿರಾದಾರ ಮಾಹಿತಿ ನೀಡಿದರು. ಯೋಗಾಸನ ಮತ್ತು ಪ್ರಾಣಾಮಗಳು, ಧ್ಯಾನದ ಬಗ್ಗೆ ಯೋಗಶಿಕ್ಷಕ ಚಂದ್ರಶೇಖರ ರಾಮನಗೌಡ ಕಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಾಂಡೆಂಟ್ ಎನ್.ಬಿ. ಮೆಳ್ಳೆಗಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಕಮಾಂಡೆಂಟ್ ಶರಣಬಸವ, ಡಾ.ಮಹೇಶ ನಾವದಗಿ ಸೇರಿದಂತೆ ಐಆರ್‍ಬಿ ಪಡೆಯ ಇನ್ಸಪೆಕ್ಟರ್ ದರ್ಜೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು. ಇನ್ಸಪೆಕ್ಟರ್ ಅನೀಲ ಉಂಕಿ ಸ್ವಾಗತಿಸಿ ನಿರೂಪಿಸಿದರು.