ವಿಶ್ವ ಮಟ್ಟಕ್ಕೆ ಮೈಸೂರು ಮೃಗಾಲಯ: ಖಂಡ್ರೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.16:- ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯವನ್ನು ಅಭಿವೃದ್ಧಿ ಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ತಿಳಿಸಿದರು.
ಮೈಸೂರು ಮೃಗಾಲಯದಲ್ಲಿ ವಾಟ್ಸ್ ಅಪ್ ಟಿಕೆಟ್ ಗೆ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ, ಈಗ ವಾಟ್ಸಪ್ ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದ್ದು, ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಕ್ಯೂನಲ್ಲಿ ನಿಂತು ಕಿರಿ ಕಿರಿ ಅನುಭವಿಸುತ್ತಿದ್ದರು. ಹೀಗಾಗಿ ವಾಟ್ಸಾಪ್ ಆನ್ಲೈನ್ ಟಿಕೆಟ್ ಉದ್ಘಾಟನೆ ಮಾಡಿದ್ದೇವೆ. ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಮೊಬೈಲ್ ವಾಟ್ಸಾಪ್ ಮೂಲಕ ಟಿಕೆಟ್ ಪಡೆಯಬಹುದು. ಲೈವ್ ಫೀಡ್ ಕೂಡ ಉದ್ಘಾಟನೆ ಮಾಡಿದ್ದೇವೆಂದರು. ಮೃಗಾಲಯದಲ್ಲಿನ ಹಾವುಗಳಿಗೆ ಹೊರಗಿನಿಂದ ಆಹಾರ ತರಲಾಗುತ್ತಿತ್ತು. ಈಗ ನಮ್ಮಲ್ಲಿಯೇ ಮೊಲ, ಇಲಿ ಸಂತತಿ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಇದರ ಜೊತೆ ಮೃಗಾಲಯದ ಅಭಿವೃದ್ಧಿಗೂ ನಾವು ಸಿದ್ದರಿದ್ದೇವೆಂದರು.
ವಿದ್ಯುತ್ ಸ್ಪರ್ಶಸಿ ಆನೆಗಳ ದುರಂತ ಸಾವು ವಿಚಾರವಾಗಿ ಪ್ರತಿಕ್ರಯಿಸಿ, ವಿದ್ಯುತ್ ತುಳಿದು ಆನೆಗಳು ಸಾವನ್ನಪ್ಪುತ್ತಿರುವುದು ದುಃಖದ ಸಂಗತಿ. ಈಗಾಗಲೇ ಆನೆಗಳ ಸಾವಿನ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ರೀತಿಯಾದ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದರು.
ಆಂಧ್ರಕ್ಕೆ ನಮ್ಮ ರಾಜ್ಯದ ಆನೆಗಳನ್ನ ಕಳುಹಿಸಿಕೊಡುವ ವಿಚಾರವಾಗಿ ಮಾತನಾಡಿ, ಆಂಧ್ರದವರು ನಮ್ಮ ರಾಜ್ಯದ ಆನೆಗಳನ್ನ ಕೇಳಿದ್ದಾರೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ನಾವು ದಸರಾ ಆನೆಗಳನ್ನ ಕೊಡಲು ಸಾಧ್ಯವಿಲ್ಲ. ನಮ್ಮ ದಸರಾ ಆನೆಗಳು ನಮ್ಮ ಅಸ್ಮಿತೆ. ಇತರೆ ಆನೆಗಳನ್ನ ನೀಡುವ ಬಗ್ಗೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವಾಗಿ ಪ್ರತಿಕ್ರಯಿಸಿ, ರೋಪ್ ವೇ ನಿರ್ಮಾಣ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಜೊತೆ ಅಭಿವೃದ್ಧಿ ಸಹ ಆಗಬೇಕು ಎಂದು ಹೇಳಿದರು.
ನಟ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ವಿಚಾರವಾಗಿ ಪ್ರತಿಕ್ರಯಿಸಿ, ನಮ್ಮ ಇಲಾಖೆಯಲ್ಲಿ ಯಾರು ರಾಯಭಾರಿಗಳು ಇಲ್ಲವೆಂದರು. ನಂತರ ಮೃಗಾಲಯದ ಸಾವಯವ ತ್ಯಾಜ್ಯವನ್ನು ಎರೆಹುಳು ಗೊಬ್ಬರ ವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿದರು. ನಂತರ ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಮೃಗಾಲಯದ ಮುಖ್ಯಾನಿರ್ವಾಹಣ ಅಧಿಕಾರಿ ಮಹೇಶ್ ಕುಮಾರ್, ಕಾಂಗ್ರೆಸ್ ಮುಖಂಡ ವರುಣ ಮಹೇಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.