15ನೇ ಹಣಕಾಸು ನಿಧಿ: ಅನುದಾನ ಬಿಡುಗಡೆಗೆ ಆಗ್ರಹ
ಬೀದರ್: ಸೆ.25:ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ನಿಧಿಯ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಹಣಮಂತವಾಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪಂಚಾಯಿತಿಗಳಿಗೆ 2024-25ನೇ ಸಾಲಿನ 15ನೇ ಹಣಕಾಸು ನಿಧಿಯ ಅನುದಾನ ಈವರೆಗೆ ಒದಗಿಸಿಲ್ಲ ಎಂದು ಆಪಾದಿಸಿದ್ದಾರೆ.
ಸದಸ್ಯರ ಆಧಾರದಲ್ಲಿ ಪ್ರತಿ ಪಂಚಾಯಿತಿಗೆ ನಿಧಿಯ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಅದರಲ್ಲೇ ಕುಡಿಯುವ ನೀರಿನ ಕೊಳವೆಬಾವಿ ದುರಸ್ತಿ, ವಿದ್ಯುತ್ ಬಿಲ್ ಪಾವತಿ, ಗ್ರಾಮ ನೈರ್ಮಲ್ಯ ಹಾಗೂ ಇತರ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿತ್ತು. ಅನುದಾನ ಬಾರದ ಕಾರಣ ಪಂಚಾಯಿತಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರಿಗೆ ಜನರಿಗೆ ಉತ್ತರ ಕೊಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.