ಶಿವಮೊಗ್ಗದಲ್ಲಿ ದರೋಡೆಗೆ ಸಂಚು ಪ್ರಕರಣ : ಉತ್ತರ ಪ್ರದೇಶ ರಾಜ್ಯದ ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ!

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜೂ.೧೬; ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶ ರಾಜ್ಯದ ವ್ಯಕ್ತಿಯೋರ್ವನಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.ಉತ್ತರ ಪ್ರದೇಶ ರಾಜ್ಯದ ಮೀರತ್ ನಿವಾಸಿ ಸಲ್ಮಾನ್ ಯಾನೆ ಲಲ್ಲಾ (24) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 8 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 10 ದಿನಗಳ ಕಾಲ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.ನ್ಯಾಯಾಧೀಶರಾದ ಪಲ್ಲವಿ ಬಿ. ಆರ್. ಅವರು13-06-2024 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ಓ. ಪುಷ್ಪಾ ಅವರು ವಾದ ಮಂಡಿಸಿದ್ದರು.ಪ್ರಕರಣದ ಹಿನ್ನೆಲೆ : 16-9-2020 ರಂದು ಶಿವಮೊಗ್ಗದ ವಿದ್ಯಾನಗರ ಮುಖ್ಯ ರಸ್ತೆಯಿಂದ ಮತ್ತೂರು ಕಡೆ ಹೋಗುವ ರಸ್ತೆಯಲ್ಲಿ ಮಾರಕಾಸ್ತ್ರಗಳೊಂದಿಗೆ, ದರೋಡೆಗೆ ಹೊಂಚು ಹಾಕುತ್ತಿದ್ದ ತಂಡವನ್ನು ಕೋಟೆ ಠಾಣೆ ಇನ್ಸ್’ಪೆಕ್ಟರ್ ಚಂದ್ರಶೇಖರ್ ಮತ್ತವರ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದರು. ನಂತರ ಈ ಸಂಬಂಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ದಾಖಲಿಸಲಾಗಿತ್ತು.