ನೀವು ಮಾಡುವ ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಸಂಜೀವಿನಿ – ಡಾ ಪ್ರದೀಪ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.15 :- ಹೆರಿಗೆ, ಅಪಘಾತ ಸೇರಿ ತುರ್ತು ಸಂದರ್ಭದಲ್ಲಿ ರಕ್ತ ನೀಡುವುದು ಅತ್ಯವಶ್ಯವಾಗಿರುವುದರಿಂದ ನೀವು ಮಾಡಿದ ರಕ್ತದಾನ  ಮತ್ತೊಬ್ಬರ ಜೀವ ಉಳಿಸುವ ಸಂಜೀವಿನಿ ಇದ್ದಂತೆ. ಹಾಗಾಗಿ, ಆರೋಗ್ಯವಂತ ಯುವಕ, ಯುವತಿಯರು ನಿಯಮಿತವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್ ಕುಮಾರ್ ತಿಳಿಸಿದರು.
ಅವರು ಪಟ್ಟಣದ ನ್ಯಾಯಾಲಯದ  ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಆರೋಗ್ಯ ಇಲಾಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಆರೋಹಣ ಸೊಸೈಟಿ ಫಾರ್ ಡೆವಲಪ್‌ಮೆಂಟ್ ಸಂಸ್ಥೆ, ಕರುನಾಡು ಶಿಕ್ಷಣ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಹೊಸಪೇಟೆ ವಾಸಂತಿದೇವಿ ಬಲ್ಡೋಟ ರಕ್ತಭಂಡಾರ ಸೇರಿ ನಾನಾ ಕಾಲೇಜುಗಳು, ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಹಾಗೂ ರಕ್ತದಾನಿಗಳ ದಿನಾಚರಣೆ ನಿಮಿತ್ತ ಕಾನೂನು ಅರಿವು -ನೆರವು ಹಾಗೂ ರಕ್ತದಾನ ಶಿಬಿರದ  ಕಾರ್ಯಕ್ರಮದಲ್ಲಿ ಮಾತನಾಡುತ್ತಾ  ರಕ್ತದಾನದಿಂದ ಅನೇಕರ ಜೀವಗಳು ಉಳಿಯುತ್ತಿದ್ದೂ ನಿಮ್ಮಗಳ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಯಾವುದೇ ರಕ್ತದೊತ್ತದ ಕಾಣಿಸದು ಮೂರು ತಿಂಗಳಿಗೊಮ್ಮೆ ಪುರುಷರು ಹಾಗೂ ನಾಲ್ಕು ತಿಂಗಳಿಗೊಮ್ಮೆ ಮಹಿಳೆಯೆರು ರಕ್ತದಾನ ಮಾಡಬಹುದಾಗಿದೆ ಎಂದು ರಕ್ತ ಹಾಗೂ ರಕ್ತದಾನದ ಮಹತ್ವವನ್ನು ಡಾ ಪ್ರದೀಪಕುಮಾರ  ತಿಳಿಸಿದರು
ಕಾರ್ಯಕ್ರಮ ಉದ್ಘಾಟಿಸಿದ ಸರಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯೆ ಡಾ.ಟಿ.ಕೊತ್ಲಮ್ಮ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಜೀವಂತವಿದ್ದು, ಶಿಕ್ಷಣದಿಂದ ವಂಚಿತರಾಗುವ ಬಾಲಕರು ಕಾರ್ಮಿಕರಾಗಿ ಹೋಟೆಲ್ ಸೇರಿ ನಾನಾ ಕಡೆ ಕೆಲಸ ಮಾಡುವುದು ಅಪರಾಧವಾಗಿದೆ ಎಂದು ತಿಳಿಸಿದರು.
ಬಾಲ ಕಾರ್ಮಿಕ ವಿರೋಧಿ ಕುರಿತು ಪ್ಯಾನಲ್ ವಕೀಲ ಸಿ.ವಿರೂಪಾಕ್ಷಪ್ಪ, ರಕ್ತದಾನದಿಂದ ಆಗುವ ಪ್ರಯೋಜನೆಗಳ ಕುರಿತು ಟಿಎಚ್‌ಒ ಡಾ.ಪ್ರದೀಪ್ ಕುಮಾರ್ ಉಪನ್ಯಾಸ ನೀಡಿದರು. ತಹಸೀಲ್ದಾರ್ ಎಂ.ರೇಣುಕಾ, ಸಹಾಯಕ ಸರಕಾರಿ ಅಭಿಯೋಜಕಿ ವೈ.ಶಿಲ್ಪಾ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನಯ್ಯ, ಡಾ.ಆನಂದ್ ಮಾತನಾಡಿದರು.
ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ವಿರುಪಾಪುರ ಎಚ್.ವೆಂಕಟೇಶ್, ಕಾರ್ಮಿಕ ಇಲಾಖೆ ಅಧಿಕಾರಿ ಚಂದ್ರಕಾoತ್, ಸರಕಾರಿ ತಾಲೂಕು ಆಸ್ಪತ್ರೆ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್, ಕರುನಾಡು ಸಂಸ್ಥೆ ಕಾರ್ಯದರ್ಶಿ ಹುಡೇಂ ಕೃಷ್ಣಮೂರ್ತಿ, ಪ್ಯಾನಲ್ ವಕೀಲ ಡಿ.ಕರಿಬಸವರಾಜ, ಉಪನ್ಯಾಸಕ ಶಿವಕುಮಾರ್ ಸೇರಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನ್ಯಾಯಾಲಯದಿಂದ ಮದಕರಿನಾಯಕ ವೃತ್ತದವರಿಗೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಅನೇಕರು ರಕ್ತದಾನ ಮಾಡಿದರು.