ಶಿವಮೊಗ್ಗದಲ್ಲಿ ಗಾಂಜಾ ಮಾರುತ್ತಿದ್ದವರು ಪೊಲೀಸ್ ಬಲೆಗೆ!

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜೂ. 14: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗದ ಹೊರವಲಯ ಹರ್ಷ ಫರ್ನ್ ಹೋಟೆಲ್ ಸಮೀಪದ ಪುರದಾಳು ರಸ್ತೆಯಲ್ಲಿ ನಡೆದಿದೆ.ಶಿವಮೊಗ್ಗದ ವಿನೋಬನಗರ ನಿವಾಸಿ ಮಾಲತೇಶ್ (32) ಹಾಗೂ ಶರಾವತಿ ನಗರದ ನಿವಾಸಿ ರಮೇಶ್ ವಿ (25) ಬಂಧಿತ ಆರೋಪಿಗಳೆಂದ ಗುರುತಿಸಲಾಗಿದೆ. ಆರೋಪಿಗಳು ಬೈಕ್ ನಲ್ಲಿ ಆಗಮಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು. ಜೂ. 13 ರಂದು ಖಚಿತ ವರ್ತಮಾನದ ಮೇರೆಗೆ ತುಂಗಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.14 ಸಾವಿರ ರೂ. ಮೌಲ್ಯದ 260 ಗ್ರಾಂ ತೂಕದ ಒಣ ಗಾಂಜಾ, ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ಬಾಬು ಆಂಜನಪ್ಪ ಮಾರ್ಗದರ್ಶನದಲ್ಲಿ ತುಂಗಾ ನಗರ ಠಾಣೆ ಇನ್ಸ್’ಪೆಕ್ಟರ್ ಮಂಜುನಾಥ್ ಬಿ, ಪಿಎಸ್ಐ ಶಿವಪ್ರಸಾದ್ ಮತ್ತವರ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.