ಅಧಿಕಾರಿಗಳು ಸರ್ಕಾರದ ನಿಯಮಾನುಸಾರ ಕೆಲಸ ನಿರ್ವಹಿಸಿ :- ಎಸ್.ಪಿ  ಎಂ.ಎಸ್.ಕೌಲಾಪುರೆ ತಾಕೀತು.
ಸಂಜೆವಾಣಿ ವಾರ್ತೆ
ಜಗಳೂರು.ಜೂ.೧೪:- ಸಾರ್ವಜನಿಕರನ್ನು ಅನಗತ್ಯವಾಗಿ ಕಛೇರಿಗೆ ಅಲೆದಾಡಿಸದೆ ಸಕಾಲದಲ್ಲಿ ಸರ್ಕಾರದ ನಿಯ ಮಾವಳಿಗಳ ಪ್ರಕಾರ ಕೆಲಸ ನಿರ್ವಹಿಸಬೇಕು ಎಂದು ಲೋಕಾಯುಕ್ತ ಎಸ್. ಪಿ ಎಂ.ಎಸ್.ಕೌಲಾಪುರೆ ತಾಲೂಕು ಅನುಷ್ಠಾನ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.ಸಾರ್ವಜನಿಕರ ಅರ್ಜಿಗಳನ್ನು ಸ್ವಹಿತಾಸಕ್ತಿಗಾಗಿ ಕ್ರಮ ಕೈಗೊಳ್ಳದೆ ವಿಳಂಬನೀತಿ ಅನುಸರಿಸಿದರೆ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಸೇವೆ ಸಿಗುವ ನಿಟ್ಟಿನಲ್ಲಿ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕರ ಅಹವಾಲು ಸಭೆ ನಡೆಸಲಾಗುವುದು ಎಂದು ತಿಳಿಸಿದರು.ಕೆರೆಒತ್ತುವರಿ,ಕೆರೆಗಳಲ್ಲಿ ಹೂಳೆತ್ತುವ ನೆಪದಲ್ಲಿ ಭಾರೀ ಗಾತ್ರದ ಜೆಸಿಬಿ ಯಂತ್ರದಿಂದ ಅಕ್ರಮ ಮಣ್ಣು ಮತ್ತು ಹಳ್ಳಗಳಲ್ಲಿ ಅಕ್ರಮ ಮರಳು ಸಾಗಾಟ‌ಗಳ ವಿರುದ್ದ ತಹಶೀಲ್ದಾರ್ ಅಗತ್ಯ ಕ್ರಮವಹಿಸಿ ಕಡಿವಾಣ ಹಾಕಬೇಕು ಹಾಗೂ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ಉಲ್ಲಾ ಅವರಿಗೆ ಸೂಚಿಸಿದರು.ಶಾಲೆಗಳು ಆರಂಭವಾಗಿದ್ದು ಮಕ್ಕಳಿಗೆ ಕೊಠಡಿಗಳ ಸಮಸ್ಯೆ,ಶಿಕ್ಷಕರ ಸಮಸ್ಯೆ ಕುರಿತು ಮಾಹಿತಿ ಪಡೆದರು. ಬಿಇಓ ಹಾಲಮೂರ್ತಿ ಪ್ರತಿಕ್ರಿಯಿಸಿ’ತಾಲೂಕಿನಲ್ಲಿ ಒಟ್ಟು 273 ಸರ್ಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ 64 ಸರ್ಕಾರಿ ಶಾಲೆಗಳ ದುರಸ್ಥಿಗೆ 1.66 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.ಒಟ್ಟು 16,332 ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ.3.83 ಲಕ್ಷ ವೆಚ್ಚದಲ್ಲಿ 83 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.