ಪ್ರತಿಯೊಬ್ಬರು ಪರಿಸರ ಪ್ರೇಮಿಗಳಾಗಬೇಕು:ಡಾ. ಉಮಾ
ವಿಜಯಪುರ,ಜೂ.12: ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪ್ರತಿಯೊಬ್ಬರು ಪರಿಸರ ಪ್ರೇಮ ಬೆಳೆಸಿಕೊಂಡು ಪರಿಸರ ಪ್ರೇಮಿಗಳಾಗಬೇಕು ಎಂದು ರವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಪ್ರಧಾನÀ ಕಾರ್ಯದರ್ಶಿ ಡಾ. ಉಮಾ ಭೋಸಲೆ ಹೇಳಿದರು.
ವಿಜಯಪುರ ನಗರದ ಅತಾಲಟ್ಟಿ ರಸ್ತೆಯಲ್ಲಿರುವ ರವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಶ್ರೀ ಗುರುದೇವ ಇಂಟರನ್ಯಾಶನಲ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆ ಹಾಗೂ ಶಾಲಾ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆ ಹೆಚ್ಚಾದಂತೆ ಪರಿಸರ ಪ್ರಜ್ಞೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರೂ ಗಿಡ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ನೀವಿರುವ ಪ್ರದೇಶ ಶಾಲಾ ಆವರಣ, ರಸ್ತೆಗಳು ಖಾಲಿ ಜಾಗಗಳಲ್ಲಿ ಸಸಿ ನೆಟ್ಟು ಪರಿಸರ ಕಾಳಜಿ ತೋರಬೇಕು. ಪರಿಸರ ಸಂರಕ್ಷಣೆಯಿಂದ ನಮ್ಮ ಬಾಳು ಸುಂದರ ಸುಖಮಯವಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಪ್ರೇಮಿಗಳಾಗೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರವೀಂದ್ರನಾಥ ಟ್ಯಾಗೋರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ರವೀಂದ್ರ ಭೋಸಲೆ ಮಾತನಾಡಿ, ಮಕ್ಕಳಲ್ಲಿ ನಿರಂತರ ಕ್ರಿಯಾಶೀಲತೆಯಿಂದ ಓದಿನ ಕಡೆ ಹೆಚ್ಚು ಗಮನ ಕೊಡಬೇಕು. ನಿರಂತರ ಓದಿನಿಂದ ಏನನ್ನಾದರೂ ಸಾಧಿಸಲು ಸಾಧ್ಯವಾಗಲಿದೆ. ಶಿಕ್ಷಕರು ಕಲಿಸಿದ ಅಭ್ಯಾಸವನ್ನು ಪರಿಣಾಮಕಾರಿಯಾಗಿ ಕಲಿತು ಶಾಲೆಗೆ, ಹೆತ್ತ ತಂದೆತಾಯಿಯರಿಗೆ ಗೌರವ ತರಬೇಕೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ದಿನವನ್ನು ಆಚರಿಸಿದರು. ನಂತರ ಶಾಲೆಯಲ್ಲಿ ಸರಸ್ವತಿ ಪೂಜೆ ಸಲ್ಲಿಸಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸುಬಾನ ಕೊರಬು, ಶ್ವೇತಾ ಮೋಟಗಿ, ಪ್ರಿಯಾಂಕಾ ಶಿರಮಗೊಂಡ, ತೌಶೀಮ್ ಕಾಟಿಕ, ತಹಸೀನ್ ದಫೇದಾರ, ಸ್ವಾತಿ ಜಾಧವ, ಆಫ್ರೀನ್ ಕೊರಬು, ಲಕ್ಷ್ಮೀ ಸಿಂಧೆ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು.