ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಅಗತ್ಯ-ಸುನೀಲ್
ಕೋಲಾರ,ಜೂ,೯- ಸಮೃದ್ದ, ಸಂಪದ್ಬರಿತ ರೋಗ ಮುಕ್ತ ಸಮಾಜಕ್ಕಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕಲು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕಿನ ಚೌಡೇದೇನಹಳ್ಳಿಯ ಈ ನೆಲ ಈ ಜಲ ಸಾಂಸ್ಕೃತಿಕ ಸಂಸ್ಥೆ, ನಗರದ ಸುವರ್ಣಭೂಮಿ ಸಾಂಸ್ಕೃತಿಕ ಕಲಾ ಸಂಘ ಇವರ ಆಶ್ರಯದಲ್ಲಿ ನಗರ ಹೊರವಲಯದ ಜೂಹಳ್ಳಿಯ ಅಲಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡ ನೆಟ್ಟು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪರಿಸರ ಎಂದರೆ ಗಿಡ,ಮರ ಮಾತ್ರವಲ್ಲ, ಭೂಮಿ, ಜೀವಿಗಳು ಎಲ್ಲವೂ ಪರಿಸರದ ಭಾಗವೇ ಎಂದ ಅವರು, ಮುಂದಿನ ಪೀಳಿಗೆಗೆ ಪರಿಸರ,ಭೂಮಿ ಉಳಿಸಲು ಪರಿಸರಮಾಲಿನ್ಯ ಮುಕ್ತ ನವಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಿಶ್ವಪರಿಸರ ದಿನಾಚರಣೆ ಪ್ರತಿ ವರ್ಷ ಆಚರಿಸಿದರೆ ಸಾಲದು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು, ಏರುತ್ತಿರುವ ವಿಶ್ವ ತಾಪಮಾನ ಕಡಿಮೆಯಾಗಲು ಗಿಡಮರಗಳ ಅಗತ್ಯವಿದೆ ಎಂದರು.
ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗಿ ಅದು ಭೂಮಿಯಲ್ಲಿ ಕೊಳೆಯದ ಕಾರಣ ಭೂಮಿ ಮಾಲಿನ್ಯವಾಗುತ್ತಿದೆ, ಅದನ್ನು ತಿಂದ ದನಕರು,ಪ್ರಾಣಿಗಳಿಗೂ ಮಾರಕವಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಮನೆಯಿಂದ ಹೊರ ಹೋಗುವಾಗ ಬಟ್ಟೆಯ ಕೈಚೀಲ ಬಳಸುವ ಮೂಲಕ ಪ್ಲಾಸ್ಟಿಕ್‌ಅನ್ನು ಸಾಧ್ಯವಾದಷ್ಟು ಬಳಸದಿರಲು ಪ್ರತಿಜ್ಞೆ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.
ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶದ ಜತೆಗೆ ಪ್ಲಾಸ್ಟಿಕ್ ಬಳಸಿ ಭೂಮಿಯನ್ನು ಕಲುಷಿತಗೊಳಿಸುತ್ತಿದ್ದಾನೆ, ಮುಂದಿನ ಪೀಳಿಗೆ ಬದುಕಿಗೆ ಇದು ಹಾನಿಕಾರಕವಾಗಿದ್ದು, ಅರಣ್ಯ ಉಳಿಸೋಣ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸೋಣ ಎಂದು ಹೇಳಿದರು.
ಗಿಡಮರ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರದಾಗಲಿ ಎಂದ ಅವರು, ಪ್ರಕೃತಿಯ ಜತೆ ನಾವು ಹೊಂದಿಕೊಂಡು ಹೋಗಬೇಕೆ ಹೊರತೂ ಅದರ ವಿರುದ್ದ ಹೋದರೆ ಅದರಿಂದಾಗುವ ಹಾನಿಯನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿ, ಮಕ್ಕಳು ಪರಿಸರ ಜಾಗೃತಿಯನ್ನು ನಿಮ್ಮ ಮನೆಯಿಂದಲೇ ಆರಂಭಿಸಿ ಎಂದರು.
ಶಾಲೆಯ ಮುಖ್ಯಶಿಕ್ಷಕ ಮೌಲಾನ ಮೊಹಮದ್ ಅತೀಕ್ ಉರ್ ರೆಹಮಾನ್ ರಷಿದ್ ಮಾತನಾಡಿ, ಶಿಸ್ತು ಇರುವೆಡೆ ಸ್ವಚ್ಚತೆಯೂ ಇರುತ್ತದೆ, ಮಕ್ಕಳಿಗೆ ಪ್ರತಿನಿತ್ಯ ಐದು ನಿಮಿಷ ಪರಿಸರದ ಪ್ರಾಮುಖ್ಯತೆ ಕುರಿತು ತಿಳಿ ಹೇಳಿದರೆ ಅವರಿಂದ ಪರಿಸರ ವೈವಿಧ್ಯತೆ ಉಳಿಸುವ ನಿಟ್ಟಿನಲ್ಲಿ ಮನಃಪರಿವರ್ತನೆಯಾಗಿ ಅವರಿಂದಲೇ ಮನೆ,ನಗರದಲ್ಲೂ ಪರಿಸರ ರಕ್ಷಣೆಗೆ ಮಾರ್ಗದರ್ಶನವಾಗುತ್ತದೆ ಆದ್ದರಿಂದ ಮಕ್ಕಳು ಶಾಲೆ,ಮನೆ,ಮನಸ್ಸು ಸ್ವಚ್ಚತೆಯ ಸಂಕಲ್ಪ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ಟಿ.ವಿಜಯಕುಮಾರ್, ರೈತ ಸಂಘದ ಅಧ್ಯಕ್ಷ ಅಬ್ಬಣಿ ಶಿವಪ್ಪ, ಯುವ ರೈತ ಆನಂದ್ ಕುಮಾರ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ.ಶಿವಕುಮರ್,ಕುಡುವನಹಳ್ಳಿ ಗಣೇಶಪ್ಪ ಮತ್ತಿತರರು ಪಾಲ್ಗೊಂಡಿದ್ದರು.