ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಕಾಳಜಿ ವಹಿಸಿ
ಭಾಲ್ಕಿ:ಸೆ.೨೫:ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಪ್ರಾಂಶುಪಾಲರು, ಉಪನ್ಯಾಸಕರು ಕಾಳಜಿ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾAತ ಶಾಹಬಾದಕರ್ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಶಾಲಾ ಶಿಕ್ಷಣ ಇಲಾಖೆ ಬೀದರ್, ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಂಘ ಬೀದರ್ ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ವಿಷಯಗಳ ಉಪನ್ಯಾಸಕರು ಅನುಭವಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಉಪನ್ಯಾಸಕರು ಒಂದು ಕ್ರಿಯಾಯೋಜನೆ ರಚಿಸಿಕೊಂಡು ತಮ್ಮನ್ನು ತಾವು ತೊಡಗಿಸಿಕೊಂಡು ಈ ವರ್ಷ ದ್ವಿತೀಯ ಪಿಯುಸಿಯ ಫಲಿತಾಂಶ ಸುಧಾರಿಸಲು ಪ್ರಯತ್ನಿಸಬೇಕು ಎಂದರು.
ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಧನಾತ್ಮಕ ಮನೋಭಾವನೆಯನ್ನು ಉಪನ್ಯಾಸಕರು ಬೆಳೆಸಬೇಕು ಎಂದು ತಿಳಿಸಿದರು.
ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಿಕ್ಷಣದ ಅಭಿವೃದ್ಧಿಯ ಸಾಮೂಹಿಕವಾದ ಜವಾಬ್ದಾರಿ ಆಗಿದ್ದು ಫಲಿತಾಂಶ ಕಡಿಮೆ ಆಗಲು ಉಪನ್ಯಾಸಕರು ಮಾತ್ರ ಕಾರಣವಲ್ಲ ಇದಕ್ಕೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಅವುಗಳನ್ನು ಉಪನ್ಯಾಸಕರು ಗುರುತಿಸಿ ಪರಿಹಾರ ಕಂಡು ಕೊಂಡಾಗ ಫಲಿತಾಂಶ ವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ, ಉಪಾಧ್ಯಕ್ಷ ಅಶೋಕ ರಾಜೋಳೆ, ಪ್ರಧಾನ ಕಾರ್ಯದರ್ಶಿ ಡಾ.ಮನ್ಮಥ ಢೋಳೆ, ರಾಜ್ಯ ಪ್ರತಿನಿಧಿ ಡಾ.ಪ್ರಭು ಎಸ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾರ ಸೂರ್ಯವಂಶಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್, ತಾಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜೈಕಾಂತ ಗಂಗೋಜಿ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಸುಖದೇವ ಬಿರಾದಾರ್ ಸೇರಿದಂತೆ ಹಲವರು ಇದ್ದರು.
ಚನ್ನಬಸವೇಶ್ವರ ಗುರುಕುಲದ ಪ್ರಾಚಾರ್ಯ ಬಸವರಾಜ ಮೊಳಕೀರೆ ಸ್ವಾಗತಿಸಿದರು. ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಕಾAತ ಗಂಗಶೆಟ್ಟಿ ಪ್ರಾರ್ಥನೆ ಗೀತೆ ನುಡಿದರು. ಮಧುಕರ ಗಾಂವಕರ್ ನಿರೂಪಿಸಿ, ವಂದಿಸಿದರು.
ಸನ್ಮಾನ
ಇದೇ ವೇಳೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಡಿಡಿಪಿಯು ಚಂದ್ರಕಾAತ್ ಶಾಹಾಬಾದಕರ್ , ಪ್ರಾಚಾರ್ಯರಾದ ಡಾ. ಪ್ರಭು ಎಸ್,ಡಾ.ಚಂದ್ರಕಾAತ್ ಗಂಗಶೆಟ್ಟಿ, ಅಶೋಕ ರಾಜೋಳೆ ಮತ್ತು ಚಂದ್ರಕಾAತ ಬಿರಾದಾರ್ ಅವರನ್ನು ಪೂಜ್ಯರು ಸತ್ಕರಿಸಿ, ಅಭಿನಂದಿಸಿದರು.
ನಾಲ್ಕು ವಿಷಯ ಕಾರ್ಯಾಗಾರ
ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಕುರಿತು ಕಾರ್ಯಾಗಾರ ನಡೆಯಿತು. ಜಿಲ್ಲೆಯ ವಿವಿಧ ಸಂಪನ್ಮೂಲ ವ್ಯಕ್ತಿಗಳು ವಿಷಯವಾರು ಉಪನ್ಯಾಸ ನೀಡಿದರು.