ಶಿವಮೊಗ್ಗ  – ರಾಜ್ಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ : ಗಮನಹರಿಸುವುದೆ ಪಿಡಬ್ಲ್ಯೂಡಿ ಇಲಾಖೆ?

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜೂ. ೭: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 1 ನೇ ವಾರ್ಡ್ ಸೋಮಿನಕೊಪ್ಪ – ಪ್ರೆಸ್ ಕಾಲೋನಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ!ಜೂನ್ 5 ರ ಬುಧವಾರ ಸಂಜೆ ಸೋಮಿನಕೊಪ್ಪ – ಪ್ರೆಸ್ ಕಾಲೋನಿ ನಡುವಿನ ಹೆದ್ದಾರಿಯಲ್ಲಿಯೇ ಕಾರು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.ಸದರಿ ಹೆದ್ಧಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದೆ. ಲಾರಿಗಳು ಸೇರಿದಂತೆ ಭಾರೀ ಸರಕು ಸಾಗಾಣೆ ವಾಹನಗಳ ಓಡಾಟವಿದೆ. ವಿನೋಬನಗರ ಪೊಲೀಸ್ ಚೌಕಿಯಿಂದ ಸೋಮಿನಕೊಪ್ಪದವರೆಗೆ ಚತುಷ್ಪಥ ರಸ್ತೆ ಮಾರ್ಗವಿದೆ. ಆದರೆ ಅಲ್ಲಿಂದ ಮುಂದಕ್ಕೆ ರಸ್ತೆ ಕಿರಿದಾಗಿದೆ. ವಾಹನಗಳ ದಟ್ಟಣೆಗೆ ಅನುಗುಣವಾಗಿ ರಸ್ತೆಯ ಅಗಲವಿಲ್ಲ.ಇದರಿಂದ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಪ್ರದೇಶದವರೆಗೆ ಸುವ್ಯವಸ್ಥಿತ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಈ ಮೂಲಕ ಸುಗಮ ಜನ – ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಲೋಕೋಪಯೋಗಿ ಇಲಾಖೆಗೆ ಆಗ್ರಹಿಸಿದ್ದಾರೆ.