ಬದುಕಿನ ವಿಧಾನ ಚೆನ್ನಾಗಿದ್ದರೆ ಬಾಹ್ಯ ಪರಿಸರ ಚೆನ್ನಾಗಿರುತ್ತದೆ

ಸಂಜೆವಾಣಿ ವಾರ್ತೆ
ಸಾಣೇಹಳ್ಳಿ, ಜೂ.6; ಆಂತರಿಕ ಪರಿಸರದಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಬಾಹ್ಯ ಪರಿಸರ ಸ್ವಚ್ಛಗೊಳ್ಳಲು ಸಾಧ್ಯ. ಆಂತರಿಕ ಪರಿಸರದ ಶುದ್ಧಿಯೇ ಬಾಹ್ಯ ಪರಿಸರದ ಶುದ್ಧಿಗೆ ಸಹಕಾರಿಯಾಗುತ್ತದೆ. ಮನುಷ್ಯ ಮೊದಲು ಕೊಳಕು ಜೀವನ ಕಳೆದುಕೊಳ್ಳಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ಇಲ್ಲಿನ ಶಿವಕುಮಾರ ವನದಲ್ಲಿ ಗಿಡ ನೆಟ್ಟು `ವಿಶ್ವ ಪರಿಸರ ದಿನಾಚರಣೆ’ಯ ಹಿನ್ನೆಲೆಯಲ್ಲಿ ಮಾತನಾಡಿ ನಮ್ಮ ಆಲೋಚನೆ, ಭಾವನೆ, ನಮ್ಮ ಬದುಕಿನ ವಿಧಾನ ಚೆನ್ನಾಗಿದ್ದರೆ ಬಾಹ್ಯ ಪರಿಸರ ಚೆನ್ನಾಗಿರುತ್ತದೆ. ನಮ್ಮ ಆಂತರಿಕ ಮತ್ತು ಬಾಹ್ಯ ಪರಿಸರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಆಯಸ್ಸು ಹೆಚ್ಚಾಗುತ್ತದೆ. ಆಯಸ್ಸು ಹೆಚ್ಚಾದರೆ ಆಗ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ಸ್ಪೂರ್ತಿ ದೊರೆಯುವುದು. ವಿದ್ಯಾರ್ಥಿಗಳು ಪ್ಯಾಕೇಟ್‌ಗಳಲ್ಲಿ ದೊರೆಯುವ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿದರೆ ಆರೋಗ್ಯ ಹಾಗೂ ಪರಿಸರ ಎರಡೂ ಕಾಪಾಡಿಕೊಂಡAತೆ. ಮಕ್ಕಳ ಸ್ವಭಾವ ಪ್ಯಾಕೇಟ್ ಆಕರ್ಷಣೆಗೆ ಒಳಗಾಗಿ ಅದರಲ್ಲಿರುವ ಪದಾರ್ಥಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಪ್ಯಾಕೇಟ್‌ನಲ್ಲಿರುವ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಸಂಕಲ್ಪ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಮ್ಮ ಪರಿಸರ ಒಂದು ದಿನಕ್ಕೆ ಸ್ವಚ್ಛಗೊಳ್ಳುವಂಥದ್ದಲ್ಲ. ಅದು ವರ್ಷದುದ್ದಕ್ಕೂ ಮಾಡಬೇಕಾದ ಕಾರ್ಯ. ಪ್ರತಿಕ್ಷಣವೂ ಪರಿಸರದ ಪ್ರಜ್ಞೆ ನಮಗಿದ್ದರೆ ಶುಚಿತ್ವವನ್ನು ಕಾಪಾಡಿಕೊಳ್ಳಲಿಕ್ಕೆ ಸಾಧ್ಯ. ಮಳೆ, ಬೆಳೆ ಚೆನ್ನಾಗಿ ಆಗಬೇಕೆಂದರೆ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಲು ಮುಂದಾಗಬೇಕು. ಸಾಣೇಹಳ್ಳಿಯ ಶಿವಕುಮಾರ ವನದಲ್ಲಿ ನಮ್ಮ ಸಮ್ಮುಖದಲ್ಲಿಯೇ ಕಳೆದ ನಾಲ್ಕಾರು ದಿನಗಳಿಂದ ಮಹಾಘನಿ, ಮಾವು, ತೇಗ, ನೇರಳೆ, ಹತ್ತಿ, ಪೇರಲ, ಸಂಪಿಗೆ, ಹಲಸು ವಿವಿಧ ಜಾತಿಯ ಸುಮಾರು 1500 ಗಿಡಗಳನ್ನು ನಮ್ಮ ಶಾಲಾ ಮಕ್ಕಳು ಶ್ರಮದಾನದ ಮೂಲಕ ನೆಟ್ಟಿದ್ದಾರೆ. ಅಲ್ಲದೆ ಕಳೆದ ವರ್ಷ ನೆಡಿಸಿದ್ದ ಸಾವಿರಾರು ಗಿಡ-ಮರಗಳಿಗೆ ಸೂಕ್ತ ಮಣ್ಣು, ನೀರು, ಗೊಬ್ಬರ ಮುಂತಾದ ಪೋಷಕಾಂಶಗಳನ್ನು ಒದಗಿಸಿದ್ದಾರೆ. ಈ ಎಲ್ಲ ಗಿಡಗಳು ನಳನಳಿಸುತ್ತಿದ್ದು ನಿರೀಕ್ಷೆಗೂ ಮೀರಿದ ಬೆಳವಣಿಗೆ ಹೊಂದಿ ನೋಡುಗರ ಕಣ್ಮನ ಸೆಳೆಯುÄತ್ತಿವೆ. ನಮ್ಮ ಶಾಲಾ ಮಕ್ಕಳು ಸ್ವಯಂಪ್ರೇರಿತರಾಗಿ ಕಳೆದ ಒಂದು ವಾರದಿಂದ ಸತತವಾಗಿ ಪರಿಶ್ರಮಪಟ್ಟಿರುವುದು ನಮಗೆ ಅತ್ಯಂತ ಖುಷಿ ತಂದಿದೆ ಎಂದರು.