ಸಸ್ಯ ಮೂಲದ ಆಯುರ್ವೇದ ಚಿಕಿತ್ಸೆಗೆ ನೋಂದಾಯಿತ ವೈದ್ಯರನ್ನೇ ಸಂಪರ್ಕಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೬; ಜಿಲ್ಲೆಯ ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಯುವತಿಯು ಯಾವುದೋ ಗಿಡವನ್ನು ಔಷಧಿಸಸ್ಯ ಎಂದು ತಪ್ಪಾಗಿ ಭಾವಿಸಿ ಸೇವಿಸಿ, ಅದರ ದುಷ್ಪರಿಣಾಮದಿಂದ ಮೃತ ಹೊಂದಿರುವುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಅವರು ರಂಗೇನಹಳ್ಳಿ ಗ್ರಾಮದ ಸಂತ್ರಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಗಿಡಮೂಲಿಕೆ ಔಷಧಿ ಚಿಕಿತ್ಸೆ ಬೇಕಾದಲ್ಲಿ ಹತ್ತಿರದ ಆಯುಷ್ ಚಿಕಿತ್ಸಾಲಯ ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಇರುವಂತಹ ಪದವಿಧರ ಆಯುಷ್ ವೈದ್ಯರಿಂದಲೇ ಚಿಕಿತ್ಸೆ ಪಡೆಯಲು ಸೂಚಿಸಿದರು. ಆಯುರ್ವೇದ ಚಿಕಿತ್ಸೆ ಬೇಕಾದಲ್ಲಿ ನೋಂದಾಯಿತ ಆಯುರ್ವೇದ ವೈದ್ಯರಿಂದಲೇ ಗಿಡಮೂಲಿಕೆಗಳ ಚಿಕಿತ್ಸೆ ಪಡೆಯಬೇಕು. ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳಿಂದಾಗಿ ಆಯುರ್ವೇದ ಔಷಧಿಗಳುಗಳನ್ನು ಕಷಾಯ, ಚೂರ್ಣ, ಸ್ವರಸ ಇತ್ಯಾದಿ ರೂಪದಲ್ಲಿ ತಯಾರಿಸಬೇಕಾದ ಅವಶ್ಯಕತೆ ಇಲ್ಲ. ಆಧುನಿಕ ಔಷಧಿಗಳಂತೆ ಗಿಡಮೂಲಿಕೆ ಔಷಧಿಗಳೂ ಮಾತ್ರೆ, ಕ್ಯಾಪ್ಸುಲ್, ಟಾನಿಕ್‍ಗಳ ರೂಪದಲ್ಲಿ ವೈಜ್ಞಾನಿಕವಾಗಿ, ಸುರಕ್ಷಿತವಾಗಿ, ಸ್ವಚ್ಛವಾಗಿ ಸರ್ಕಾರದ ಜಿಎಂಪಿ ಮಾನದಂಡಗಳ ಅನುಸಾರ ತಯಾರಿಸಲ್ಪಟ್ಟು ಗ್ರಾಹಕರಿಗೆ ದೊರೆಯುತ್ತವೆ. ಇವುಗಳನ್ನು ಬಳಸುವುದು ಸುಲಭ ಹಾಗೂ ಸುರಕ್ಷಿತ ಎಂದು ತಿಳಿಸಿದರು.ನಾಟಿವೈದ್ಯಕ್ಕಿಂತ ಆಯುರ್ವೇದ ವೈದ್ಯ ಪದ್ಧತಿಯು ಅತ್ಯಂತ ವೈಜ್ಞಾನಿಕವಾಗಿದ್ದು, ಅತ್ಯಂತ ಸುರಕ್ಷಿತವಾಗಿದೆ. ಕೆಲವೊಮ್ಮೆ ಗಿಡದ ಎಲೆಗಳು ಒಂದೇ ತರನಾಗಿದ್ದು, ಔಷಧಿ ಸಸ್ಯವನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಂತ ಸಮಯದಲ್ಲಿ ಹತ್ತಿರದ ಆಯುರ್ವೇದ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಆ ಗಿಡವು ಸುರಕ್ಷಿತವೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಔಷಧಿಯಾಗಿ ಬಳಸಬೇಕು. ಮನೆಮದ್ದು ಹಾಗೂ ಔಷಧಿ ಸಸ್ಯಗಳನ್ನು ಬಳಸುವುದಾದರೆ ಅದರ ಬಗ್ಗೆ ಪೂರ್ಣ ತಿಳುವಳಿಕೆ ಇರುವವರ ಮೇಲ್ವಿಚಾರಣೆಯಲ್ಲಿ ಸೇವಿಸಬೇಕು. ಸಾಮಾನ್ಯವಾಗಿ ಸಾರ್ವಜನಿಕರು ತಿಳಿದುಕೊಂಡಂತೆ ಎಲ್ಲಾ ಗಿಡಗಳು ಆರೋಗ್ಯಕ್ಕೆ ಪೂರಕವಾಗಿ ಸುರಕ್ಷಿತವಾಗಿ ಇರುವುದಿಲ್ಲ. ಸರಿಯಾದ ವಿಧಾನದಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ ಹಾಗೂ ವಿವೇಚನಾ ರಹಿತವಾಗಿ ಸೇವಿಸಿದರೆ ಅಪಾಯ ತಪ್ಪಿದ್ದಲ್ಲ. ಆಯುರ್ವೇದ ಚಿಕಿತ್ಸೆಗಳು ಸರ್ಕಾರದವತಿಯಿಂದಲೇ ಆಯುಷ್ ಚಿಕಿತ್ಸಾಲಯಗಳಲ್ಲಿ ಉಚಿತವಾಗಿ ಲಭ್ಯ ಇವೆ ಇವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.ಎಲ್ಲಾ ಗಿಡಮೂಲಿಕೆಗಳು ಆಯುರ್ವೇದ ಔಷಧಿ ಎನಿಸಿಕೊಳ್ಳುವುದಿಲ್ಲ. ಕೆಲವೊಂದು ಗಿಡಗಳನ್ನು ಮಾತ್ರ ಸುರಕ್ಷಿತವಾಗಿ ಔಷಧಿಯಾಗಿ ಬಳಸಬಹುದು. ಸಾರ್ವಜನಿಕರು ಜಾಗರೂಕರಾಗಿ ಇರಬೇಕು. ನೋಂದಾಯಿತ ಆಯರ್ವೇದ ವೈದ್ಯರಿಂದಲೇ ಸಸ್ಯಮೂಲದ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಹಿರಿಯೂರು ಆಯುರ್ವೇದ ಸರ್ಕಾರಿ ಆಸ್ಪತ್ರೆಯ ತಜ್ಞವೈದ್ಯರಾದ ಡಾ. ಟಿ.ಶಿವಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.