ವಿಶ್ವಗುರು ಸೋಲಿಸುವ ಹುನ್ನಾರ ಯಶಸ್ವಿಯಾಗದು
ಸಂಜೆವಾಣಿ ನ್ಯೂಸ್
ಮೈಸೂರು.ಜೂ.06:- ದೇಶದ ಎಲ್ಲ ಜಾತಿ, ಧರ್ಮ, ರಾಜಕೀಯ ಶಕ್ತಿಗಳು ಒಗ್ಗೂಡಿ ಷಡ್ಯಂತರ ನಡೆಸಿದರೂ ವಿಶ್ವಗುರು ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಈ ಸಂಸತ್ ಚುನಾವಣೆಯಲ್ಲಿ ದೇಶದ ಮತದಾರರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಮಾಜಿ ನಗರಪಾಲಿಕೆ ಸದಸ್ಯ ಪ್ರಶಾಂತ್ ಗೌಡ ತಿಳಿಸಿದರು.
ನಗರದ ಜಗನ್‍ಮೋಹನ ಅರಮನೆಯ ಮುಂಭಾಗ 23ನೇ ವಾರ್ಡಿನ ಬಿಜೆಪಿ ಕಾರ್ಯಕರ್ತರು ಮೈಸೂರು-ಕೊಡಗು ಲೋಕಸಭೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಪೌರಕಾರ್ಮಿಕರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದ ಅವರು, ಮೋದಿ ವಿರುದ್ಧ ಈ ದೇಶದ ಎಲ್ಲ ಶಕ್ತಿಗಳು ಒಗ್ಗೂಡಿ ಸೋಲಿಸಲು ಇನ್ನಿಲ್ಲದ ಕಸರತ್ತು ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಅದು ಮೋದಿ ಅವರ ತಾಕತ್ತು ಎಂದರು.
ಈ ದೇಶದ ಮತದಾರರು ಕೊಟ್ಟ ತೀರ್ಪನ್ನು ಸ್ವಾಗತಿಸುತ್ತೇವೆ. ಮೂರನೇ ಬಾರಿಗೆ ಮತ್ತೊಮ್ಮೆ ಮೋದಿ ಅವರು ಈ ದೇಶದ ಪ್ರಧಾನಿ ಆಗಲಿದ್ದು, ದೇಶವನ್ನು ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ಒಂದನೇ ದೇಶವನ್ನಾಗಿ ಮಾಡುವುದು ಖಚಿತ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಮುಂದಿನ ಎಲ್ಲ ಚುನಾವಣೆಗಳಲ್ಲೂ ಮುಂದುವರಿಯಲಿದೆ. ಈ ನಾಡಿನ ಮತದಾರರು ಈ ಎರಡೂ ಪಕ್ಷಗಳ ಮೈತ್ರಿಯನ್ನು ಒಪ್ಪಿದ್ದು, ಅದರ ಪರಿಣಾಮವೇ ಈ ಚುನಾವಣೆಯ ಫಲಿತಾಂಶವಾಗಿದೆ ಎಂದು ವಿವರಿಸಿದರು.
ಮಾಜಿ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ, ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ನೀಡಿರುವ ಚಾಮರಾಜ ಕ್ಷೇತ್ರದ ಜನತೆಗೆ ವಿಶೇಷ ಅಭಿನಂದನೆಗಳು. ಇದಕ್ಕೆ ಕಾರಣಕರ್ತರಾದ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್.ಆರ್, ವಾರ್ಡಿನ ಮುಖಂಡರಾದ ರಾಜೇಂದ್ರ, ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಪಾಪಣ್ಣ, ರಾಮು, ನಾರಾಯಣ್ ಶರ್ಮ, ಮಹೇಶ್, ಲಕ್ಷ್ಮಿ, ಶ್ರೀಲಕ್ಷ್ಮೀ, ರವಿಶಂಕರ್, ರಾಧಾಕೃಷ್ಣ ಶೆಟ್ಟಿ, ಪದ್ಮಾ, ಚರಣ್ ಶ್ರೇಷ್ಠಿ, ರಾಮಣ್ಣ, ಲೋಹಿತ್, ಕಲ್ಕೆರೆ ಹರೀಶ್, ವಿಜಯ್, ಪ್ರವೀಣ್, ದರ್ಶನ್, ಸಚಿನ್, ಕುಮಾರ್, ರವಿ, ಗೀತಾ, ಸ್ವಾಮಿ, ಭೂಷಿತ್, ಚೇತನ್ ಇದ್ದರು.