ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ: ಸಂಗಮೇಶ ಬಬಲೇಶ್ವರ
ವಿಜಯಪುರ,ಜೂ.5:ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮವಾದದ್ದು. ಅದನ್ನು ಎಲ್ಲರೂ ಗೌರವಿಸಲೇಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದೆಯಾದರೂ ನಿರೀಕ್ಷಿತ ಫಲಿತಾಂಶ ಬಾರದಿರುವುದಕ್ಕೆ ಬೇಸರವಾಗಿದೆ. ರಾಜು ಆಲಗೂರ ಅವರ ಸೋಲನ್ನು ನಿರೀಕ್ಷಿಸಿರಲಿಲ್ಲ. ಆದರೆ ಅವರಿಗೆ ಗಣನೀಯ ಪ್ರಮಾಣದಲ್ಲಿ ಮತದಾನ ಮಾಡಿದ, ಮತದಾರರಿಗೆ ಪಕ್ಷದ ಪರವಾಗಿ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿರಬಹುದು. ಆದರೆ ಅವರು ಸದಾ ಜನರೊಂದಿಗೆ ಬೆಳೆದು ಬಂದವರು, ಜಿಲ್ಲಾ ಉಸ್ತುವಾರಿ ಸಚಿವÀ ಡಾ. ಎಮ್.ಬಿ. ಪಾಟೀಲರ ಹಾಗೂ ಜಿಲ್ಲೆಯ ಶಾಸಕರು ಪಕ್ಷದ ಮುಖಂಡರ ಜೊತೆಗೂಡಿ ಮತ್ತೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಸಿಕೊಂಡಿರುವುದು ಭಾರತದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ ಎನ್ನುವುದರ ಪ್ರಬಲ ಮುನ್ಸೂಚನೆಯಾಗಿದೆ. ಹಾಗಾಗಿ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಸದಾ ಜನರ ನೋವಿಗೆ ಸ್ಪಂದಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ. ನಾವು ಈ ತಾತ್ಕಾಲಿಕ ಸೋಲನ್ನ ಸವಾಲಾಗಿ ಸ್ವೀಕರಿಸಿ, ನಿಷ್ಠೆಯಿಂದ ಪಕ್ಷದ ಕೆಲಸವನ್ನು ಮಾಡಿದರೆ, ದೇಶದಲ್ಲಿ ಕಾಂಗ್ರೆಸ್ಸಿನ ವೈಭವದ ದಿನಗಳು ಹಾಗೂ ಜನಪರ ಆಡಳಿತ ಮತ್ತೆ ಮರುಕಳಿಸಲಿದೆ ಎಂದು ಬಬಲೇಶ್ವರ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.