ಸಮೀಕ್ಷೆಗಳು ಅದೇನೇ ಹೇಳಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಡಬ್ಬಲ್‌ ಡಿಜಿಟ್‌ ಗ್ಯಾರಂಟಿ:ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ವಿಶ್ವಾಸ
ಕಲಬುರಗಿ:ಜೂ.2:ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಕಾಂಗ್ರೆಸ್‌ ಪಕ್ಷ ಉತ್ತಮ ಸಾಧನೆ ಮಾಡುವ ದಿಶೆಯಲ್ಲಿ ಆಶಾವಾದಿಯಾಗಿದೆ ಎಂದಿರುವ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌, ಸಮೀಕ್ಷೆಗಳು ಅದೇನೇ ಹೇಳಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಡಬ್ಬಲ್‌ ಡಿಜಿಟ್‌ ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್‌ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಪಕ್ಷಕ್ಕೆ ರಾಜ್ಯದಲ್ಲಿ 28 ಸ್ತಾನಗಳ ಪೈಕಿ 14 ರಿಂದ 16 ಸ್ಥಾನ ನಿಶ್ಚಿತ ಎಂದು ಗೊತ್ತಾಗಿದೆ. ರಾಜ್ಯ ಸರಕಾರ ನುಡಿದಂತೆ ನಡೆದಿದೆ, ರಾಜ್ಯದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ನಮ್ಮ ಗೆಲುವಿನ ಅಂಕಿ ಲೆಕ್ಕ ರಾಜ್ಯದಲ್ಲಿ 20 ಕ್ಕೆ ತಲುಪಿದರೂ ಅಚ್ಚರಿ ಪಡೆಬೇಕಾಗಿಲ್ಲ ಎಂದು ಡಾ. ಅಜಯ್ ಸಿಂಗ್‌ ಹೇಳಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನ ಸಂತಸದಲ್ಲಿದ್ದಾರೆ, ಅದರಿಂದಾಗಿ ಪಕ್ಷದ ಪರವಾಗಿ ಉತ್ತಮ ನಂಬಿಕೆಯ ವಾತಾವರಣ ಮೂಡಿದೆ. ಕೇಂದ್ರದ ಬಿಜೆಪಿ ಸರಕಾರದ ವಿರೋಧಿ ಅಲೆಯೂ ಇಲ್ಲಿ ಕೆಲಸ ಮಾಡಿದೆ. ಇವೆಲ್ಲ ಕಾರಣದಿಂದಾಗಿ ಕಾಂಗ್ರಸ್‌ಗೆ ರಾಜ್ಯದಲ್ಲಿ ಭರ್ಜರಿ ಗೆಲವು ಸಿಗಲಿದೆ.
ಇನ್ನೂ ದೇಶಾದ್ಯಂತ ಇಂಡಿಯಾ ಒಕ್ಕೂಟಕ್ಕೆ 295 ಸ್ಥಾನ ಸಿಗಲಿದೆ. ದೇಶಾದ್ಯತ ಬಿಜೆಪಿ ವಿರೋಧಿ ಲ್ಲೇ ತುಂಬಾನೇ ಇತ್ತು. ಇದಲ್ಲದೆ ಕಾಂಗ್ರೆಸ್ ಪಕ್ಷ ರಾಜ್ಯದ ಗ್ಯಾರಂಟಿಯೋಜನೆಗಳ ಮಾದರಿಯಲ್ಲಿಯೇ ಲೋಕಸಭೆಯಲ್ಲೂ ಪ್ರಕಟಿಸಿರುವ ಅನೇಕ ಗ್ಯಾರಂಟಿ ಯೋಜನೆಗಳು ಜನರ ನಂಬಿಕೆಗೆ ಪಾತ್ರವಾಗಿವೆ. ಹೀಗಾಗಿ ದೇಶಾದ್ಯಂತ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ 295 ಸ್ಥಾನ ಸಿಗೋದರಲ್ಲಿ ದೂಸ್ರಾ ಮಾತಿಲ್ಲ ಎಂದೂ ಡಾ. ಅಜಯ್ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆ ಕಲಬುರಗಿಯಲ್ಲಿ ಕಾಂಗ್ರೆಸ್‌ ಜಯಭೇರ ಬಾರಿಸೋದು ಶತಸಿದ್ಧ. ಈ ಬಾರಿ ಇಲ್ಲಿ ಬಿಜೆಪಿ ಧೂಳಿಪಟವಾಗಲಿದೆ. ಕಾಂಗ್ರೆಸ್‌ನ ಅಭ್ಯರ್ಥಿ ರಾಧಾಕೃಷ್ಣ ಅವರು ಅತೀ ಹೆಚ್ಚಿನ ಬಹುಮತದೊಂದಿಗೆ ಗೆದ್ದು ಲೋಕಸಭೆ ಪ್ರವೇಶ ಮಾಡೋದು ಗ್ಯಾರಂಟಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.