ಶೈಕ್ಷಣಿಕ ಬಲವರ್ಧನೆಗೆ ಗುಣಾತ್ಮಕ ಬೋಧನೆಗೆ ಒತ್ತು ನೀಡಲಿ
ಹುಬ್ಬಳ್ಳಿ,ಜೂ.2: ಪ್ರಸಕ್ತ ವರ್ಷವನ್ನು ಶೈಕ್ಷಣಿಕ ಬಲವರ್ಧನಾ ವರ್ಷ ಎಂದು ಇಲಾಖೆ ಘೋಷಿಸಿದೆ. ಹೀಗಾಗಿ ಶೈಕ್ಷಣಿಕ ಬಲವರ್ಧನೆಗೆ ಗುಣಾತ್ಮಕ ಬೋಧನೆಗೆ ಶಿಕ್ಷಕರು ಒತ್ತು ನೀಡಬೇಕು ಎಂದು ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಪ್ಪಗೌಡ ಹೇಳಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ಶಾಲೆ, ಘಂಟೀಕೇರಿ, ಶಾಸಕರ ಮಾದರಿ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ನಂ.5, ಘಂಟೀಕೇರಿ, ಮಾದರಿ ಹೆಣ್ಣು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ನಂ.1 ಮೂರೂ ಶಾಲೆಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ತಾಲೂಕಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸುವ ಭಾಷಾ ಸಪ್ತಾಹ ಮತ್ತು ಗಣಿತ ಸಪ್ತಾಹ ಕಳೆದ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಹಂತ ದಾಟುವ ವಿದ್ಯಾರ್ಥಿ ಅಲ್ಲಿ ಕಲಿಯಬೇಕಾದ ಕನಿಷ್ಠ ಕಲಿಕಾ ಪರಿಕಲ್ಪನೆಗಳನ್ನು ಕಡ್ಡಾಯವಾಗಿ ಕಲಿತೇ ಮುಂದಿನ ಹಂತದ ಶಿಕ್ಷಣಕ್ಕೆ ಅಡಿ ಇಡುವಂತೆ ಮಾಸಿಕವಾರು ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಕ್ರಿಯಾ ಯೋಜನೆಯನ್ವಯ 2-8 ನೇ ತರಗತಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ನಿತ್ಯದ ಬೋಧನೆಯ ಜೊತೆಯಲ್ಲಿಯೇ ಈ ಸಪ್ತಾಹಗಳು ಸಾಗಲಿದ್ದು, ಇಲಾಖೆಯ ಘೋಷವಾಕ್ಯವನ್ನು ಅಕ್ಷರಶಹಃ ನಿಜವಾಗಿಸುವಲ್ಲಿ ಹುಬ್ಬಳ್ಳಿ ಶಹರದ ಶಿಕ್ಷಕರು ಸಿದ್ಧರಾಗಬೇಕು. ವಿಶೇಷ ಆಸಕ್ತಿ ಮತ್ತು ಮಕ್ಕಳ ಮನ ಮುಟ್ಟುವ ಹಲವಾರು ಚಟುವಟಿಕೆಗಳ ಮೂಲಕ ಪ್ರೌಢ ಹಂತ ಮತ್ತು ಎಸ್.ಎಸ್. ಎಲ್.ಸಿ. ಪರೀಕ್ಷೆಯ ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಎಸ್.ಶಿವಳ್ಳಿಮಠ ಮಾತನಾಡಿ, ಶಿಕ್ಷಣ ಕುರಿತು ಸ್ಪರ್ಧಾತ್ಮಕ ಸನ್ನಿವೇಶದಲ್ಲಿರುವ ಇಂದು ನಾವು, ಕಲಿಕಾ ಗುಣಮಟ್ಟ ಉಳಿಸಿಕೊಳ್ಳುವ ಮೂಲಕ ಮಾತ್ರ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಉಳಿಸಿಕೊಳ್ಳಲು ಸಾಧ್ಯ. ಈ ಗುಣಮಟ್ಟ ಕಾಪಾಡಲು ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಇಲಾಖೆ ಉಚಿತ ದಾಖಲಾತಿ (1-5 ನೇ ತರಗತಿ), ಕನಿಷ್ಠ ಶುಲ್ಕ ( 8-10 ನೇ ತರಗತಿ), ಉಚಿತ ಸಮವಸ್ತ್ರ, ಉಚಿತ ಪಠ್ಯ ಪುಸ್ತಕ, ಚಟುವಟಿಕೆ ಆಧಾರಿತ ಕಲಿಕೆ, ಮಧ್ಯಾಹ್ನ ಉಪಹಾರ ಯೋಜನೆ, ಕ್ಷೀರ ಯೋಜನೆ, ಪಿ.ಎಂ.ಶ್ರೀ ಯೋಜನೆಯನ್ವಯ ಸುಸಜ್ಜಿತ ಶಾಲಾ ಉಪಕರಣಗಳು ಇನ್ನೂ ಹತ್ತು -ಹಲವು ಯೋಜನೆ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆಯುವ ಮೂಲಕ ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಕ್ರಮ ವಹಿಸಲು ಮುಂದಾಗಬೇಕು ಎಂದರು.
ಡಯಟ್‍ನ ಉಪನ್ಯಾಸಕರಾದ ಮಂಜುಳಾ ಅಂಬಿಗೇರ ಮಾತನಾಡಿ, “ ಂಟಟ ಣhe ತಿoಡಿಞs ಚಿಡಿe eಚಿsಥಿ ಜಿoಡಿ busಥಿ ಠಿeoಠಿಟe ಟಿ ಜiಜಿಜಿiಛಿuಟಣ ಜಿoಡಿ ಟಚಿzಥಿ ಠಿeoಠಿಟe” ಎಂಬ ಮಾತಿನಂತೆ ಕಲಿಸುವ ಉದಾತ್ತ ಮನೋಭಾವ ಇದ್ದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬಹುದು ಮತ್ತು ಶಾಲಾ ಪ್ರಾರಂಭವನ್ನು ಉತ್ಸವದಂತೆ ಉತ್ಸಾಹದಿಂದ ಆಚರಿಸುತ್ತಿರುವ ತಾಲೂಕಿನ ಎಲ್ಲಾ ಶಾಲೆಗಳಿಗೂ ಅಭಿನಂದನೆಗಳನ್ನು ತಿಳಿಸಿದರು.