ಲಾಡು ಪ್ರಸಾದದಲ್ಲಿ ದನದ ಕೊಬ್ಬು:ಟಿಟಿಡಿಯಿಂದ ವರದಿ ಸಲ್ಲಿಕೆ
ಬೆಂಗಳೂರು,ಸೆ.೨೪- ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಆಂಧ್ರಪ್ರದೇಶ ಸರ್ಕಾರಕ್ಕೆ ೪೦ ಪುಟಗಳ ವರದಿ ಸಲ್ಲಿಸಲಾಗಿದೆ.
ವೈಎಸ್‌ಆರ್‌ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಪ್ರಕರಣದ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಟಿಡಿಪಿ ಹೇಳಿಕೆ ನೀಡಿತ್ತು. ಇದೀಗ ಸರ್ಕಾರಕ್ಕೆ ಟಿಟಿಡಿ ಅಧಿಕಾರಿ ಜೆ. ಶ್ಯಾಮಲಾ ಅವರಿಂದ ೪೦ ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ತಿರುಮಲ ಮತ್ತು ತಿರುಚನೂರು ದೇಗುಲಗಳಲ್ಲಿ ಲಾಡು ಮತ್ತು ಇತರ ಪ್ರಸಾದಗಳನ್ನು ಸಿದ್ಧಪಡಿಸಲು ಆರು ತಿಂಗಳಿಗೊಮ್ಮೆ ಅಗ್‌ಮಾರ್ಕ್ ಗುರುತು ಹೊಂದಿರುವ ಹಸುವಿನ ತುಪ್ಪವನ್ನು ಇ-ಟೆಂಡರ್ ಮೂಲಕ ಖರೀದಿಸಲಾಗುತ್ತದೆ. ಟಿಟಿಡಿ ಮತ್ತು ಎಫ್‌ಎಸ್‌ಎಸ್‌ಎಐ ಮಾನದಂಡಗಳ ಪ್ರಕಾರ ತುಪ್ಪ ಗುಣಮಟ್ಟ ಹೊಂದಿರಬೇಕು ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ.
ದಿನಕ್ಕೆ ೧೫ ಸಾವಿರ ಕೆ.ಜಿಯಂತೆ ವಾರ್ಷಿಕ ಸುಮಾರು ೨೦೦ ಕೋಟಿ ರೂ. ಮೌಲ್ಯದ ತುಪ್ಪ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಲಾಗಿದೆಯಾದರೂ, ಅವುಗಳ ಪರೀಕ್ಷೆಗೆ ಅಗತ್ಯವಿರುವ ಸಾಧನಗಳು ಟಿಟಿಡಿಯ ಪ್ರಯೋಗಾಲಯದಲ್ಲಿಲ್ಲ. ಹೀಗಾಗಿ ಕಲಬೆರಕೆ ಕುರಿತು ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ
ಗುತ್ತಿಗೆದಾರರು ಟ್ಯಾಂಕರ್‌ಗಳಲ್ಲಿ ಕಳುಹಿಸಿದ ತುಪ್ಪದ ತೇವಾಂಶ, ಕೊಬ್ಬಿನಾಮ್ಲ, ಮಿಶ್ರಿತ ಬಣ್ಣ, ಕರಗುವ ಬಿಂದು ಸೇರಿದಂತೆ ಕೆಲ ಮೂಲ ಪರೀಕ್ಷೆಗಳನ್ನಷ್ಟೇ ಮಾಡಲಾಗುತ್ತದೆ. ಈ ವೇಳೆ ಏನಾದರೂ ವ್ಯತ್ಯಾಸ ಕಂಡು ಬಂದರೆ,ಆ ಟ್ಯಾಂಕರ್‌ಗಳ ತುಪ್ಪವನ್ನು ತಿರಸ್ಕರಿಸಲಾಗುತ್ತದೆ.
ಕಲಬೆರಕೆ ಹೊರತುಪಡಿಸಿ ಇತರ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ ೧೪ ಮಾದರಿಗಳನ್ನು ೨೦೨೨ರಲ್ಲಿ ತಿರಸ್ಕರಿಸಲಾಗಿತ್ತು. ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಕಲಬೆರಕೆಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸಬಹುದಾಗಿದ್ದರೂ ಅದನ್ನು ಎಂದಿಗೂ ಮಾಡಿಲ್ಲ. ತಮಿಳುನಾಡು ಮೂಲದ ಎ.ಆರ್ ಡೈರಿಯ ಶಂತಿಕ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ ಎಂದು ಮಾಹಿತಿ ನೀಡಿದೆ.