ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿ ಕಂಪ್ಯೂಟರ್ ತರಗತಿ ಆರಂಭ
ಕೋಲಾರ,ಮೇ,೩೧- ಪೊಲೀಸ್ ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕಂಪ್ಯೂಟರ್ ತರಗತಿಗಳನ್ನು ಆರಂಭಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
ನಗರದ ಪೊಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಶಾಲೆಯಲ್ಲಿ ಪೊಲೀಸರ ಮಕ್ಕಳಿಗಾಗಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಗರದ ಪೊಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಶಾಲೆ ಸರ್ಕಾರಿ ಹುದ್ದೆಗಳನ್ನು ಸೃಷ್ಟಿಸುವ ಕೇಂದ್ರವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಕಂಪ್ಯೂಟರ್ ತರಗತಿಗಳನ್ನು ಪ್ರಾರಂಭಿಸಲಾಗುವ ಮೂಲಕ ಅಲ್ಲಿನ ಪೊಲೀಸರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವುದಾಗಿ ತಿಳಿಸಿದರು.
ಸದಾ ಸಮಾಜದ ಹಿತ ಕಾಯುವ ಒತ್ತಡದಲ್ಲೇ ಇರುವ ಪೊಲೀಸರಿಗೆ ತಮ್ಮ ಕುಟುಂಬ ಮತ್ತು ಮಕ್ಕಳ ಕುರಿತು ಹೆಚ್ಚಿನ ಕಾಳಜಿ ತೋರಲು ಕಷ್ಟವಾಗಿದೆ, ತಮ್ಮ ಕುಟುಂಬಕ್ಕಿಂತ ಸಮಾಜವೇ ಮುಖ್ಯ ಎಂದು ದುಡಿಯುತ್ತಿರುವ ಈ ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಎಲ್ಲಾ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
ನಗರದ ಪೊಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಶಾಲೆಗೆ ಕಂಪ್ಯೂಟರ್‌ಗಳನ್ನು ಕೊಡುಗೆ ನೀಡಿದ ಎಂ.ಬಿಟಲ್ ಟೆಕ್ನಾಲಜಿಸ್ ಇಂಡಿಯಾ ಲಿಮಿಟೆಡ್‌ನ ಸಿಬ್ಬಂದಿಗಳಾದ ಶರತ್, ಹಲಗಪ್ಪನ್, ಜಯಂತ್ ರೋಟರಿಯನ್, ಸರಿತಾ ಕುಮಾರಿ ಎಂಐಟಿ ಕಂಪ್ಯೂಟರ್ ಅಕಾಡೆಮಿ ರವರನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ಶಾಲೆಯ ಪ್ರಾಂಶುಪಾಲ ಹಾಗೂ ಎಸ್ಪಿ ಅವರ ಆಪ್ತಸಹಾಯಕ ಡಿ.ಎಂ. ನಾಗರಾಜ ಮತ್ತು ಬೋಧಕರಾದ ಎನ್.ಮಂಜುನಾಥ್ ರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ಅಡಿಷನಲ್ ಎಸ್ಪಿ ರವಿಶಂಕರ್, ಕೋಲಾರ ವಿಭಾಗದ ಡಿವೈಎಸ್ಪಿ ನಾಗ್ತೆ, ಆರ್‌ಪಿಐ ರವಿ, ಎ, ಎ ಎ ಓ ರವಿಕುಮಾರ್, ಉಪನಿರೀಕ್ಷಕರಾದ ಅರುಣ್ ಗೌಡ ಪಾಟೀಲ್ ಮತ್ತು ಶಹಬಾಜ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.