ಬಿ.ಎಸ್.ಎನ್.ಎಲ್.ಅಧಿಕಾರಿಗಳೊಂದಿಗೆ ಡಿ.ಸಿ. ಸಭೆ:ಮೊಬೈಲ್ ಟವರ್ ಗಳಿಂದ ಅವಘಡ ಆಗದಂತೆ ಎಚ್ಚರಿಕೆ ವಹಿಸಿ
ಕಲಬುರಗಿ:ಮೇ.28: ಮೋಬೈಲ್ ಟವರ ಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಅವಘಡವಾಗದಂತೆ ಎಚ್ಚರಿಕೆ ವಹಿಸಬೇಕು. ಟವರ್ ಗಳ ಸುರಕ್ಷತೆ ದೃಷ್ಟಿಯಿಂದ ಕ್ಷೇತ್ರ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದು ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ನಿರ್ದೇಶನ ನೀಡಿದರು.
ಮಂಗಳವಾರ ಬಿ.ಎಸ್.ಎನ್.ಎಲ್. ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಅವರು ಇತ್ತೇಚೆಗೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಬಿ‌.ಎಸ್.ಎನ್.ಎಲ್ ಟವರ್ ನ ರಾಡ್ ಬಿದ್ದು ಯುವತಿಯೊಬ್ಬಳಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ ಅವರು, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಮಳೆಗಾಲ ಸಮಯ ಇದಾಗಿರುವುದರಿಂದ ಬಿರುಗಾಳಿ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಟವರ್ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಸಣ್ಣ-ಪುಟ್ಟ ದುರಸ್ತಿಗಳಿದಲ್ಲಿ ಕೂಡಲೆ ಅದನ್ನು ಸರಿಪಡಿಸಬೇಕು. ಇದಲ್ಲದೆ ಖಾಸಗಿ ಮೊಬೈಲ್ ಸಂಸ್ಥೆಯ ಪ್ರತಿನಿಧಿಗಳಿಗೂ ಸುರಕ್ಷಾ ದೃಷ್ಟಿಯಿಂದ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದರು.
ಸಭೆಯಲ್ಲಿ ಬಿ.ಎಸ್.ಎನ್.ಎಲ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.