ಡೆತ್ ನೋಟ್ ಬರೆದಿಟ್ಟು ಸಮಾಜ ಕಲ್ಯಾಣಾಧಿಕಾರಿ ಆತ್ಮಹತ್ಯೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮೇ ೨೮: ಬೆಂಗಳೂರು ವಸಂತನಗರದಲ್ಲಿರುವ ಖಾದಿಭವನದ ಕಟ್ಟಡದಲ್ಲಿರುವ  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧೀಕ್ಷಕ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಡೆತ್‌ನೋಟ್‌ನಲ್ಲಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ. ಸುಮಾರು 85 ಕೋಟಿ ಹಣ ಅವ್ಯವಹಾರ ಮಾಡಿಕೊಂಡಿರುವ ಅಕ್ರಮವನ್ನ ತೆರೆದಿಟ್ಟಿರುವ ಅವರು, ಇದಕ್ಕೆ ಕಾರಣರಾದ ಅಧಿಕಾರಿಗಳ ಹೆಸರನ್ನ ಬರೆದು ಸಾವಿಗೂ ಹಾಗೂ ಅಕ್ರಮಕ್ಕೆ ಅವರೇ ಕಾರಣ ಎಂದು ನಮೂದಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಚಂದ್ರಶೇಖರನ್‌ ಎಂಬವರು ಶಿವಮೊಗ್ಗದ ವಿನೋಬನಗರದಲ್ಲಿರುವ ನಿವಾಸದಲ್ಲಿ ಬಟ್ಟೆಯೊಂದರಲ್ಲಿ  ಕುಣಿಕೆ ಮಾಡಿಕೊಂಡು ಅದರಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರ ಸಾವು ಇದೀಗ ಸರ್ಕಾರದಲ್ಲಿಯೇ ಸಂಚಲನ ಮೂಡಿಸುತ್ತಿದೆ. ಏಕೆಂದರೆ ಅವರು ತಮ್ಮ ಡೆತ್‌ನೋಟ್‌ನಲ್ಲಿ ತಾವು ನಿರ್ವಹಿಸುತ್ತಿದ್ದ ನಿಗಮದಲ್ಲಿ ಆಗಿರುವ ಅವ್ಯವಹಾರವನ್ನು ಬಿಚ್ಚಿಟ್ಟಿದ್ದಾರೆ. ಇಲಾಖಾ ಖಾತೆಯ ಹಣವನ್ನು ನಿಗಮದ ಅಧಿಕಾರಿಗಳು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಬಗ್ಗೆ ಎಳೆಎಳೆಯಾಗಿ ವಿವರಿಸಿರುವ ಅವರು ತಾವು ಹೇಡಿಯಲ್ಲ. ಆದರೆ ಅವಮಾನ ಸಹಿಸಲು ಆಗುತ್ತಿಲ್ಲ. ನಡೆದ ಅಕ್ರಮ ವಹಿವಾಟಿಗೆ ತಾವು ಕಾರಣರಲ್ಲ ,ಪ್ರಸ್ತಾಪಿಸಿರುವ ಅಧಿಕಾರಿಗಳೇ ಅಕ್ರಮವೆಸಗಿದ್ದಾರೆ. ಇದೇ ಕಾರಣಕ್ಕಾಗಿ ನೇಣಿಗೆ ಶರಣಾಗುತ್ತಿರುವುದಾಗಿ ಬರೆದಿದ್ದಾರೆ.