ಗೌರವ ಧನವನ್ನು ಪಡೆಯದೇ ಶಿಕ್ಷಕರ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ, ಶಿಕ್ಷಕರ ಸಂಕಷ್ಟಗಳಿಗ ಸ್ಪಂದಿಸುವೆ: ಕೆ.ವಿವೇಕಾನಂದ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ 28- ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್‍ಡಿಎ ಮೈತ್ರಿ ಅಭ್ಯರ್ಥಿಯಾಗಿರುವ ನಾನು ನಿಮ್ಮೆಲ್ಲರ ಅಶೀರ್ವಾದದಿಂದ ಆಯ್ಕೆಯಾದರೆ, ಗೌರವ ಧನವನ್ನು ಪಡೆದುಕೊಳ್ಳದೇ, ಇನ್ನು ಹೆಚ್ಚಿನ ಹಣವನ್ನು ಹಾಕಿ ಶಿಕ್ಷಕರ ಕ್ಷೇಮಾಭಿವೃದ್ದಿ ನಿಧಿಯನ್ನು ಸ್ಥಾಪಿಸಿ, ಸಂಕಷ್ಟದಲ್ಲಿರುವ ನೀವು ಸೂಚಿಸಿದ ಶಿಕ್ಷಕರಿಗೆ ನೆರವು ನೀಡಲು ಬದ್ದನಾಗಿದ್ದೇನೆ ಎಂದು ಎನ್‍ಡಿಎ ಮೈತ್ರಿ ಕೂಟದ ಅಭ್ಯರ್ಥಿ ಕೆ.ವಿವೇಕಾನಂದ ತಿಳಿಸಿದರು.
ತಾಲೂಕಿನಲ್ಲಿ ಬಿರುಸಿನ ಪ್ರಚಾರ ಮಾಡಿದ ಅವರು, ಮರಿಯಾಲ ಐಟಿಐ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಪದವಿ ಪೂರ್ವ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ಜೆಎಸ್‍ಎಸ್ ಮಹಿಳಾ ಕಾಲೇಜು ಹಾಗೂ ಸೇವಾ ಭಾರತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಶಿಕ್ಷಕರ ಮತದಾರರನ್ನು ಖುದ್ದು ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಕೆ. ವಿವೇಕಾನಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರಗಳ ಸೂಚನೆಯಂತೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಶಿಕ್ಷಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಅವರ ಸೇವಕನಾಗಿ ಕೆಲಸ ಮಾಡುವ ಆಸೆ ನನ್ನದಾಗಿದೆ. ಗುರುಗಳ ಋಣ ತೀರಿಸುವ ಸುದಿನ ಇದಾಗಿದೆ. ನಿಮ್ಮೆಲ್ಲ ಅಶೀರ್ವಾದಿಂದ ನಾನು ವಿಧಾನ ಪರಿಷತ್‍ಗೆ ಆಯ್ಕೆಯಾದರೆ, ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಭಗವಂತ ಕೃಪೆ ನನ್ನ ಮೇಲಿದೆ. ಬಡತನದಿಂದ ಬೆಳೆದವನು. ಶಿಕ್ಷಕರ ಸಂಕಷ್ಟಗಳು ಅರ್ಥವಾಗಿದೆ. ಹೀಗಾಗಿ ನಿಮ್ಮೆಲ್ಲದ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಶಿಕ್ಷರಕ ನಿಧಿ ಸ್ಥಾಪನೆ ಜೊತೆಗೆ ಶಿಕ್ಷಕರ ಬಡಾವಣೆಯನ್ನು ನಿರ್ಮಾಣ ಮಾಡಿ, ಅತ್ಯಂತ ಕಡಿಮೆ ದರದಲ್ಲಿ ಶಿಕ್ಷಕ ಬಂಧುಗಳು ಸಹ ಸ್ವಂತ ನಿವೇಶನವನ್ನು ಹೊಂದಿ ನೆಮ್ಮದಿ ಜೀವನ ನಡೆಸುವಂತಾಗಬೇಕು. ಶಿಕ್ಷಕರ ಶ್ರೇಯೋಭಿವೃದ್ದಿಗೆ ದುಡಿಯವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗೆ ನಾಲ್ಕು ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ. ಈ ಬಾರಿ ನನಗೊಂದು ಅವಕಾಶ ಕೊಡಿ, ನನ್ನ ಕೆಲಸವನ್ನು ನೋಡಿ ಎಂದು ಕೆ. ವಿವೇಕಾನಂದ ತಿಳಿಸಿದರು.
ಬಿಜೆಪಿ ನಿಕಟ ಪೂರ್ವ ಅಭ್ಯರ್ಥಿ ಬಿ. ನಿರಂಜನ್‍ಕುಮಾರ್ ಮಾತನಾಡಿ, ಬಹಳ ಸರಳ ಸಜ್ಜನಿಕೆವುಳ್ಳ ಎನ್‍ಡಿಎ ಅಭ್ಯರ್ಥಿ ಕೆ. ವಿವೇಕಾನಂದ ಅವರಿಗೆ ಶಿಕ್ಷಕ ಬಂಧುಗಳು ಪ್ರಥಮ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಿ ಕೊಡಿ. ಕಳೆದ ಅವಧಿಯಲ್ಲಿ ನನಗೆ ನೀಡಿದ ಪ್ರೀತಿ ವಿಶ್ವಾಸ ಹಾಗೂ ಬೆಂಬಲವನ್ನು ಎನ್‍ಡಿಎ ಅಭ್ಯರ್ಥಿಯಾಗಿರುವ ವಿವೇಕಾನಂದ ಅವರಿಗೆ ನೀಡಿ ಗೆಲ್ಲಿಸಬೇಕು. ಅವರನ್ನು ಗೆಲ್ಲಿಸಿದರೆ ನಾನು ಗೆದ್ದಂತೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ರಾಮಚಂದ್ರ, ಡಾ. ಎ.ಆರ್. ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ, ಉಪಾಧ್ಯಕ್ಷ ಎಚ್.ಎಂ. ಬಸವಣ್ಣ, ಮಾಜಿ ಅಧ್ಯಕ್ಷ ಆರ್. ಸುಂದರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಮಲೆಯೂರು ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲಾ, ಜೆಡಿಎಸ್ ಮುಖಂಡ ಆಲೂರು ಮಲ್ಲು, ನೂರೊಂದುಶೆಟ್ಟಿ, ನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜ್ ಮೊದಲಾದವರು ಇದ್ದರು.