ವ್ಯವಸ್ಥಿತ ಮತ ಎಣಿಕೆಗೆ ಜಿಲ್ಲಾಧಿಕಾರಿ ಸೂಚನೆ
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.28: ಮತ ಎಣಿಕೆಗೆ ನಿಗದಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮಗಳನ್ನು ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ಸೋಮವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ – 2024ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಮತ ಎಣಿಕೆ ಪ್ರಕ್ರಿಯೆ ಜೂನ್ 4ರಂದು ವಿಜಯಪುರ ಸೈನಿಕ ಶಾಲೆಯಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಶುರುವಾಗಲಿದ್ದು, ಮತ ಎಣಿಕೆ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.
ಅಂದು ಬೆಳಗ್ಗೆ 7 ಗಂಟೆಯ ಒಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಹಾಲ್‍ನಲ್ಲಿ ಹಾಜರಿರಬೇಕು. ಮತ ಎಣಿಕೆ ಹಾಲ್ ಒಳಗಡೆ ಮೊಬೈಲ್‍ನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಹಾಲ್ ಒಳಗಡೆ ಪೊಲೀಸ್, ಸೆಕ್ಯುರಿಟಿ ಸಿಬ್ಬಂದಿಗಳಿಗೆ ಅನಾವಶ್ಯಕವಾದ ಪ್ರವೇಶವಿರುವುದಿಲ್ಲ. ಅಭ್ಯರ್ಥಿಗಳಲ್ಲದ ಸಚಿವರು, ರಾಜ್ಯ ಸಚಿವರು, ಕೇಂದ್ರ ಸಚಿವರಿಗೆ ಮತ ಎಣಿಕೆ ಹಾಲ್ ಒಳಗಡೆ ಪ್ರವೇಶ ಇರುವುದಿಲ್ಲ ಎಂದು ಹೇಳಿದರು.
ಮತ ಎಣಿಕೆ ಪ್ರಾರಂಭವಾಗುವ ಮೊದಲು ವಿವಿಪ್ಯಾಟ್ ಆನ್ ಮಾಡುವುದು, ರಿಸಲ್ಟ್ ಬಟನ್ ಪ್ರೆಸ್ ಮಾಡುವುದು ಹಾಗೂ ಅದನ್ನು ಕ್ಲೋಸ್ ಮಾಡುವಾಗ ಬಹು ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಗೆ ಸಂಬಂಧಿಸಿದಂತ ನಿಯೋಜನೆಗೊಂಡ ಏಜೆಂಟ್‍ರ ಬಳಿ ಶಾಂತವಾಗಿ ವರ್ತಿಸಿ, ಅವರಿಗೆ ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಪರಿಹರಿಸಿರಿ. ಪ್ರತಿ ಇವಿಎಂಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು. ಇಂದಿನ ತರಬೇತಿ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಏಕೆಂದರೆ ಮತ ಎಣಿಕೆ ಮೇಲ್ವೀಚಾರಕರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಮಾಸ್ಟರ್ ಟ್ರೇನರ್ ಅಶೋಕ ಲಿಮಕರ ಅವರು ತರಬೇತಿಗೆ ಆಗಮಿಸಿದ ಸಿಬ್ಬಂದಿಗಳಿಗೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನುಸರಿಸಬಹುದಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಅವರು ತರಬೇತಿಗೆ ಆಗಮಿಸಿದ ಸಿಬ್ಬಂದಿಗೆ ಮತ ಎಣಿಕೆಯ ಪ್ರಕ್ರಿಯೆಗಳ ಬಗ್ಗೆ ಇವಿಎಂ ಮಶಿನ್ ಹಾಗೂ ವಿವಿಪ್ಯಾಟ್‍ಗಳ ಕಾರ್ಯ ವೈಖರಿ, ಅದನ್ನು ಬಳಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ವಿವಿಪ್ಯಾಟ್‍ನ ಮಾದರಿ ಮತ ಎಣಿಕೆ ಪ್ರಾತ್ಯಕ್ಷಿಕೆ ಪರೀಕ್ಷೆ ಮಾಡಿದ ಜಿಲ್ಲಾಧಿಕಾರಿ:
ಲೋಕಸಭಾ ಚುನಾವಣೆ – 2024ರ ಮತಎಣಿಕೆ ಪೂರ್ವಸಿದ್ಧತೆ ತರಬೇತಿಯಲ್ಲಿ ಸ್ವತಃ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾದರಿ ವಿವಿಪ್ಯಾಟ್‍ನ್ನು ವಿಕ್ಷೀಸಿ ಮತ ಎಣಿಕೆಯ ವಿಧಾನಗಳ ಹಂತಗಳನ್ನು ಪರಿಶೀಲನೆ ಮಾಡಿದರು.