ಅಡಿಕೆ ಆಮದು ನೀತಿ ಕೇಂದ್ರದ ತಪ್ಪು ನಡೆ; ಉಡುಪಿ-ದಕ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ನೆಲಕ್ಕೆ
ಪುತ್ತೂರು;  ಉಡುಪಿ ಮತ್ತು ದಕ ಜಿಲ್ಲೆಯ ಜನತೆಯ ಬದುಕಿನ ಬೆಳೆಯಾದ ಅಡಿಕೆಗೆ ಪರ್‍ಯಾಯವಾಗಿ ಭೂತಾನ್‌ನಿಂದ ಅಡಿಕೆ ಆಮದು ಮಾಡುವ ನೀತಿಗೆ ಕೇಂದ್ರ ಸರ್ಕಾರ ಗ್ರೀನ್‌ಸಿಗ್ನಲ್ ಕೊಟ್ಟಿರುವುದು ಅತ್ಯಂತ ಆತಂಕಕಾರಿ ವಿಚಾರವಾಗಿದ್ದು, ಇದರಿಂದ ಅಡಿಕೆ ದರ ಇಳಿಕೆಯಾಗಿ ಎರಡೂ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ನೆಲಕ್ಕೆ ಬೀಳಲಿದೆ. ಇದೊಂದು ಗಂಭೀರವಾದ ವಿಚಾರವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಅಭಿಪ್ರಾಯಪಟ್ಟರು.
ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಭೂತಾನ್ ನಿಂದ ನಿರಂತರವಾಗಿ ಅಡಿಕೆ ಆಮದುಗೊಂಡರೆ ಇಲ್ಲಿನ ಅಡಿಕೆ ದರ ಕೇವಲ ರೂ.೧೫೦ಕ್ಕೆ ತಲುಪುವ ಅಪಾಯವಿದೆ. ಕೇಂದ್ರ ಸರ್ಕಾರ ಇಂತಹ ತೀರ್ಮಾನ ಮಾಡಿರುವುದು ಯಾಕೆ ಎಂಬುವುದು ಗೊತ್ತಿಲ್ಲ. ಆದರೆ ಇದರಿಂದ ಜಿಲ್ಲೆಯ ಜನತೆಯ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಸಚಿವರಿಗೆ ಈ ಮಾಹಿತಿಯನ್ನು ಸಮರ್ಪಕ ರೀತಿಯಲ್ಲಿ ಮುಟ್ಟಿಸುವ ಕೆಲಸ ನಡೆಯಬೇಕು. ವಾಸ್ತವಸ್ಥಿತಿಯನ್ನು ಅವರ ಮುಂದೆ ಇಟ್ಟು ಇದನ್ನು ತಡೆಯುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದರು.
ಕ್ಯಾಂಪ್ಕೊ ನಿದ್ದೆ ಮಾಡುವುದಲ್ಲ..!
ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರಲಿಕ್ಕಿಲ್ಲ. ದಳ್ಳಾಲಿಗಳ ಇದರ ಮಧ್ಯೆ ಸೇರಿಕೊಂಡು ಇದನ್ನು ಮಾಡಿರುವ ಸಾಧ್ಯತೆಯೂ ಇದೆ. ಜನಪ್ರತಿನಿಧಿಗಳು ಈ ಬಗ್ಗೆ ಸರಿಯಾದ ಮಾಹಿತಿಯನ್ನು ಕೇಂದ್ರದ ಸಚಿವರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಬೇಕು. ಲೋಕಸಭಾ ಸದಸ್ಯರು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಕ್ಯಾಂಪ್ಕೋ ಇದೆ. ಇವರು ನಿದ್ದೆ ಮಾಡುವುದಲ್ಲ. ಎಂಪಿಗಳನ್ನು ಕರೆದುಕೊಂಡು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿ ಈ ಆಮದು ತಡೆಯುವ ಕೆಲಸಕ್ಕೆ ಮುಂದಾಗಬೇಕು. ಸರ್ಕಾರದ ಬೆಂಬಲಬೆಲೆ ತೆಗೆದುಕೊಂಡು ಕೇವಲ ವ್ಯಾಪಾರ ಮಾತ್ರ ಮಾಡುವುದಲ್ಲ. ಕೇಂದ್ರ ಸರ್ಕಾರಕ್ಕೆ ಉಡುಪಿ ಮತ್ತು ದಕ ಜಿಲ್ಲೆಯ ಸಂಕಷ್ಟವನ್ನು ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ಮುಖ್ಯಮಂತ್ರಿ-ಕೃಷಿ ಸಚಿವರ ಭೇಟಿ
ರಾಜ್ಯದ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರನ್ನು ಈ ವಾರದಲ್ಲಿ ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ರಾಜ್ಯದಿಂದ ಕೇಂದ್ರಕ್ಕೆ ಮನವಿ ಮಾಡುವ ಕೆಲಸಕ್ಕೆ ನಾನು ಮುಂದಾಗುತ್ತೇನೆ. ಇದೊಂದು ಪಕ್ಷಾತೀತವಾದ ಹೋರಾಟವಾಗಬೇಕಾಗಿದೆ. ಈ ಆಮದು ನಿರಂತರವಾದರೆ ಅತ್ಯಂಕ ಸಂಕಷ್ಷ ಇಲ್ಲಿಯ ಜನತೆಯದ್ದಾಗಲಿದೆ. ಈ ಆಮದಿಗೆ ಅನುಮತಿ ನೀಡಿರುವುದು ಕೇಂದ್ರ ಸರ್ಕಾರದ ತಪ್ಪು ನಡೆಯಾಗಿದೆ. ಹಿಂದೆಯೂ ಇದೇ ರೀತಿ ಆದಾಗ ಅಡಿಕೆ ದರಕ್ಕೆ ತೀವ್ರವಾದ ಹೊಡೆತ ಬಿದ್ದಿತ್ತು. ಕೇಂದ್ರ ಸರ್ಕಾರದ ಮನವೊಲಿಕೆ ಮಾಡುವ ಮೂಲಕ ಜಿಲ್ಲೆಯ ಜನತೆಯ ಬದುಕು ರಕ್ಷಿಸಲು ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ಎರಡೂ ಜಿಲ್ಲೆಗಳ ಕೃಷಿಕರ ಬದುಕಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಅವರು ಹೇಳಿದರು.