ವಾರಕ್ಕೆ ಮೂರು ಸಲ ಕಲಬುರಗಿ- ಬೆಂಗಳೂರು ನಡುವೆ ಮೇ 27ರಿಂದ ವಿಶೇಷ ರೈಲು
ಕಲಬುರಗಿ:ಮೇ 25: ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಕಲಬುರ್ಗಿ ನಗರಗಳ ನಡುವೆ ಸಾವಿರಾರು ಪ್ರಯಾಣಿಕರು ರೈಲುಗಳನ್ನು ಬಳಸಿ ಪ್ರಯಾಣಿಸುತ್ತಾರೆ. ಸದ್ಯ ಬೇಸಿಗೆ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕೂಡ ಇತ್ತು. ಹೀಗಾಗಿ ನೈಋತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಬೇಸಿಗೆ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರ್ಗಿ ನಗರಗಳ ನಡುವೆ ಟ್ರೈ-ವೀಕ್ಲಿ (ವಾರಕ್ಕೆ ಮೂರು ಸಲ) ಬೇಸಿಗೆ ವಿಶೇಷ ರೈಲು ಓಡಿಸಲಾಗುತ್ತಿದೆ.
ಮೇ 27ರಿಂದ ಜೂನ್ 27ರವರೆಗೆ ರೈಲು ಸಂಖ್ಯೆ 06261 ಪ್ರತಿ ಸೋಮವಾರ, ಬುಧವಾರ ಮತ್ತು ಗುರುವಾರ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಲಿನಿಂದ ರಾತ್ರಿ 23:50 ಗಂಟೆಗೆ ಹೊರಟು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮಾರ್ಗದ ಮೂಲಕ ಮರುದಿನ ಮಧ್ಯಾಹ್ನ 12:30 ಗಂಟೆಗೆ ಕಲಬುರ್ಗಿ ನಿಲ್ದಾಣವನ್ನು ತಲುಪಲಿದೆ
ಮೇ 28ರಿಂದ ಜೂನ್ 28ರವರೆಗೆ ರೈಲು ಸಂಖ್ಯೆ 06262 ಪ್ರತಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಕಲಬುರ್ಗಿಯಿಂದ ಸಾಯಂಕಾಲ 16:50 ಗಂಟೆಗೆ ಹೊರಟು ನಾಗಸಮುದ್ರ ಮಾರ್ಗದ ಮೂಲಕ ಮರುದಿನ ಬೆಳಗ್ಗೆ 04:45 ಗಂಟೆಗೆ ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಲಿನಿಂದ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ದಿಕ್ಕಿನಲ್ಲೂ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಬುಕ್ಕಿಂಗ್ ಮತ್ತು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.